ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಸಂಸದರಾಗಿ ಉತ್ತಮ ಕೆಲಸ ಮಾಡಿ, ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರನ್ನು ಮತ್ತೆ ಸಂಸದರನ್ನಾಗಲಿ ಮಾಡಲು ಸ್ವಕುಳಿಶಾಲಿ ಮತ್ತು ಪದ್ಮಶಾಲಿ ನೇಕಾರರು ಬೆಂಬಲ ನೀಡುತ್ತಿರುವುದಾಗಿ ಜೆ.ನಟರಾಜು ತಿಳಿಸಿದರು.
ಇಲ್ಲಿನ ಮೇಗಳಬೀದಿ ಜಿಹ್ನೇಶ್ವರಿ ಪ್ರಾರ್ಥನಾ ಮಂದಿರದಲ್ಲಿ ನೇಕಾರರ ಸಂಘದ ವತಿಯಿಂದ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸುರೇಶ್ ಅವರು ದಿನದ 24ಗಂಟೆಯೂ ದಣಿವಿಲ್ಲದೆ ಕೆಲಸ ಮಾಡುವ ಯುವ ರಾಜಕಾರಣಿಯಾಗಿ, ಅತ್ಯುತ್ತಮ ಸಂಸದರಾಗಿದ್ದಾರೆ. ಅವರು ಸಂಸದರಾದ ಮೇಲೆ ಕನಕಪುರ ತಾಲ್ಲೂಕಿನಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಸಣ್ಣ ಸಮುದಾಯವಾಗಿರುವ ನೇಕಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.
ನೇಕಾರರು ಪ್ರಮುಖವಾಗಿ ಮಗ್ಗವನ್ನೇ ನಂಬಿ ಜೀವನ ಮಾಡುತ್ತಿರುವ ಸಮುದಾಯವಾಗಿದೆ. ವಿದ್ಯುತ್ ಅವಲಂಬಿಸಿರುವ ನೇಕಾರರಿಗೆ ವಿದ್ಯುತ್ ಸಮಸ್ಯೆ ಬಾರದಂತೆ ನೋಡಿಕೊಂಡಿದ್ದಾರೆ. ಸಣ್ಣ ಪ್ರಮಾಣದಲ್ಲಿರುವ ನೇಕರಾರರಿಗೆ ಬೇರೆ ಸಮುದಾಯದವರಿಂದ ರಕ್ಷಣೆ ನೀಡಿದ್ದಾರೆ ಎಂದು ಹೇಳಿದರು.
ಸ್ವಕುಳಿಶಾಲಿ ಮತ್ತು ಪದ್ಮಶಾಲಿ ಸಂಘದ ಮುಖಂಡರಾದ ಆರ್.ವಿಜಯಕುಮಾರ್, ಡಿ.ಮನೋಹರ್, ಎ.ಮೋಹನ್, ಪರಮೇಶ್, ಎಸ್.ನಾರಾಯಣ್ರಾವ್, ಪೋಂದೆ ರಮೇಶ್ ಉಪಸ್ಥಿತರಿದ್ದರು.