ಹಾರೋಹಳ್ಳಿ: ಪ್ರಯಾಣಿಕ ಸುರಕ್ಷತೆ ಮರೆತು ತಿರುವಿನಲ್ಲಿ ವೇಗವಾಗಿ ಬಸ್ ಚಾಲನೆ ಮಾಡುವ ಕೆಎಸ್ಆರ್ಟಿಸಿ ಬಸ್ ಚಾಲಕ, ನಿರ್ವಾಹಕ ಹಾಗೂ ಬಾಗಿಲು ಇಲ್ಲದಿದ್ದರೂ ಬಸ್ ನಿಯೋಜಿಸುವ ಡಿಪೊ ಸಿಬ್ಬಂದಿ ವಿರುಧ್ಧ ಕ್ರಮ ಕೈಗೊಳ್ಳಬೇಕು ಎಂದು ಜಯಕರ್ನಾಟಕ ಜನಪರ ವೇದಿಕೆ, ರೈತ ಸಂಘ ಸೇರಿದಂತೆ ಪ್ರಗತಿ ಪರ ಸಂಘಟನೆಗಳು ಒತ್ತಾಯಿಸಿವೆ.
ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹಾರೋಹಳ್ಳಿ ಕೆಎಸ್ಆರ್ಟಿಸಿ ಬಸ್ ಡಿಪೋಗೆ ಭೇಟಿ ನೀಡಿ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು.
ಇತ್ತೀಚಿಗೆ ಬಾಗಿಲು ಇಲ್ಲದ ಬಸ್ವೊಂದನ್ನು ಪ್ರಯಾಣಕ್ಕೆ ನಿಯೋಜಿಸಿದ್ದರು. ಆ ಬಸ್ ಅತಿ ವೇಗವಾಗಿ ಸಂಚರಿಸಿದ ಪರಿಣಾಮ ಪ್ರಯಾಣಿಕರೊಬ್ಬರು ಬಿದ್ದು ಗಾಯಗೊಂಡಿದ್ದರು. ಆದರೂ ಬಸ್ ಸಿಬ್ಬಂದಿ ಗಾಯಾಳು ನೆರವಿಗೆ ಬಾರದೆ, ಬಸ್ ಸಂಚಾರ ಮುಂದುವರೆಸಿದ್ದಾರೆ. ಇದು ಅಮಾನವೀಯ ಮತ್ತು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಇಂತಹ ಬೇಜವಾಬ್ದಾರಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಪ್ರಗತಿಪರ ಸಂಘಟನೆಗಳ ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಿದ ಡಿಪೋ ವ್ಯವಸ್ಥಾಪಕ ಸಚಿನ್, ಇತ್ತೀಚಿಗೆ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದ ಅವರು, ಈಗಾಗಲೇ ಗಾಯಾಳುವನ್ನು ಭೇಟಿ ಮಾಡಿದ್ದೇನೆ. ಗಾಯಾಳುವಿನ ಚಿಕಿತ್ಸಾ ವೆಚ್ಚ ಭರಿಸಲಾಗುವುದು ಎಂದು ತಿಳಿಸಿದರು.
ಎಲ್ಲಾ ಸಮಸ್ಯೆ ಗಮನದಲ್ಲಿದೆ. ಇವೆಲ್ಲವನ್ನು ಮೂರು ವಾರದಲ್ಲಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ, ಕರ್ನಾಟಕ ರಾಷ್ಟ್ರ ಸಮಿತಿಯ ಕನಕಪುರ ಅಧ್ಯಕ್ಷ ಪ್ರಶಾಂತ್, ರೈತ ಸಂಘದ ಗ್ರಾಮಾಭಿವೃಧ್ಧಿಯ ಎಸ್.ದೇವರಾಜು, ನಾರಾಯಣಪುರ ಪಾತಯ್ಯ, ಗಿರೀಶ್, ಮಾನವ ಹಕ್ಕು ಭ್ರಷ್ಟಾಚಾರ ಸಂಸ್ಥೆಯ ತಾಲೂಕು ಅಧ್ಯಕ್ಷ ನರಸಿಂಹಯ್ಯ, ಗಜೇಂದ್ರ ಸಿಂಗ್, ಮಾಣಿಕ್ಯ ಒಡೆಯರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.