ಹಾರೋಹಳ್ಳಿ: ‘ನಮ್ಮ ತೆರಿಗೆ ನಮ್ಮ ಹಕ್ಕು ಕುರಿತು ಡಿ.ಕೆ. ಸುರೇಶ್ ಅವರ ಹೋರಾಟದಿಂದ ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟಾಗಿದ್ದು, ನ್ಯಾಯಯುತ ತೆರಿಗೆ ಪಾಲನ್ನು ನೀಡಲು ಕೋರ್ಟ್ ಆದೇಶ ನೀಡಿರುವುದು ಸುರೇಶ್ ಅವರಿಗೆ ಸಂದ ಜಯ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಹಾರೋಹಳ್ಳಿ ಪಟ್ಟಣದ ಬಸ್ ನಿಲ್ದಾಣದ ವೃತ್ತದಲ್ಲಿ ಮಂಗಳವಾರ ಬೆಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ ಅವರ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ಯಾವುದೇ ಹಣ ಬಾಕಿ ಇಲ್ಲ ಎಂದು ಹೇಳಿದ್ದರು. ಅವರ ಮಾತಿಗೆ ಕೋರ್ಟ್ ಈಗ ಉತ್ತರ ನೀಡಿದ್ದು ಜನರು ಇವರಿಗೆ ತಕ್ಕಪಾಠ ಕಲಿಸಬೇಕು’ ಎಂದು ಹೇಳಿದರು.
‘ದೇವೇಗೌಡರು ಇಲ್ಲಿ ಬಂದು ಅವರ ಅಳಿಯನನ್ನು ಬಿಜೆಪಿ ಪಕ್ಷದಿಂದ ನಿಲ್ಲಿಸಿದ್ದಾರೆ. ದೇವೇಗೌಡರು, ಕುಮಾರಣ್ಣನವರು ಕಟ್ಟಿದ ಜೆಡಿಎಸ್ ಪಕ್ಷ ಏನಾಯ್ತು? ನಿಮ್ಮ ಅಳಿಯನನ್ನು ತೆನೆಹೊತ್ತ ರೈತ ಮಹಿಳೆ ಚಿಹ್ನೆಯಲ್ಲಿ ಯಾಕೆ ನಿಲ್ಲಿಸಲಿಲ್ಲ ಎಂದು ಜನ ಕೇಳುತ್ತಿದ್ದಾರೆ. ನಿಮ್ಮ ಪಕ್ಷದ ಚಿಹ್ನೆ ಬೇಕಾಗಿಲ್ಲ. ಬಿಜೆಪಿಯಿಂದ ನಿಲ್ಲಿಸಿದ್ದೀರಿ ಇದು ಎಂಥ ಪರಿಸ್ಥಿತಿ ನಿಮಗೆ’ ಎಂದು ಪ್ರಶ್ನಿಸಿದರು.
ಜನರ ಕೈಗೆ ಚೊಂಬು: ಜನರಿಗೆ ಉಪಯುಕ್ತವಾಗುವ ಯಾವುದಾದರೂ ಒಂದು ಗ್ಯಾರಂಟಿ ಯೋಜನೆಯನ್ನು ಅಥವಾ ಒಂದು ಕೆಲಸವನ್ನು ಕುಮಾರಸ್ವಾಮಿ ಅವರಾಗಲೀ ಯಡಿಯೂರಪ್ಪ ಅವರಾಗಲೀ, ದೇವೇಗೌಡರಾಗಲಿ ಮಾಡಿದ್ದಾರೆಯೇ? ಅವರು ನಿಮಗೆ ನೀಡಿರುವುದು ಬರಿ ಚೊಂಬು ಎಂದು ಚೊಂಬನ್ನು ಪ್ರದರ್ಶನ ಮಾಡಿದರು.
‘ಉಳುವವನಿಗೆ ಭೂಮಿಯ ಒಡೆಯ, ನಿವೇಶನ, ವೃದ್ಧರಿಗೆ ಪಿಂಚಣಿ, ಮಕ್ಕಳಿಗೆ ಬಿಸಿಯೂಟ, ಸ್ತ್ರೀಶಕ್ತಿ ಸಂಘ ಸ್ಥಾಪನೆ ಹಾಲಿಗೆ ಐದು ರೂಪಾಯಿ ಪ್ರೋತ್ಸಾಹ ಧನ, ಕೃಷಿಭಾಗ್ಯ, ಅನ್ನಭಾಗ್ಯ, ಇನ್ನೂ ಹಲವಾರು ಯೋಜನೆಯನ್ನು ಕಾಂಗ್ರೆಸ್ ತಂದಿದ್ದು ಎಲ್ಲಾ ಯೋಜನೆಗಳು ಕಾಂಗ್ರೆಸ್ ಸರ್ಕಾರದ್ದೇ’ ಎಂದು ಹೇಳಿದರು.
‘ಮಂಡ್ಯ ಹಾಸನ ಕೋಲಾರ ಮೂರೂ ಕ್ಷೇತ್ರದಲ್ಲಿ ನಿಮ್ಮ ಸೋಲು ಖಚಿತ ಅಲ್ಲೆಲ್ಲ ನಾನು ಪ್ರಚಾರ ಮಾಡಿ ಬಂದಿದ್ದು ಯಾವುದೇ ಕಾರಣಕ್ಕೂ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ’ ಎಂದರು.
ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್ ರವಿ, ನಾರಾಯಣ ಗೌಡ, ಭುಜಂಗಯ್ಯ, ಜೆಸಿಪಿ ಅಶೋಕ್, ಎಚ್ಎಸ್ ಹರೀಶ್ ಕುಮಾರ್, ಎಚ್ ಸಿ. ಶೇಖರ್, ಮೋಹನ್ ಹೊಳ್ಳ ಇತರರು ಹಾಜರಿದ್ದರು.