ಕನಕಪುರ: ರೇಷ್ಮೆ ಕೃಷಿಯಲ್ಲಿ ಬಳಸುತ್ತಿರುವ ಕೀಟನಾಶಕ ಪರಿಸರದಲ್ಲಿ ವಿಷ ಉಂಟು ಮಾಡಿ ಮನುಷ್ಯರ ದೇಹ ಸೇರುತ್ತಿದೆ. ಪರಿಷರ ಕಲುಷಿತವಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ರೇಷ್ಮೆ ಇಲಾಖೆ ನಿವೃತ್ತ ವಿಜ್ಞಾನಿ ಡಾ.ಚಲುವಾಚಾರಿ ತಿಳಿಸಿದರು.
ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಶುಕ್ರವಾರ ನಡೆದ ದ್ವಿತಳಿ ರೇಷ್ಮೆ ಬೆಳೆಗಾರರ ಕಾರ್ಯಾಗಾರದಲ್ಲಿ ಮಾತನಾಡಿದರು.
ರೈತರು ರೇಷ್ಮೆ ಕೃಷಿಯಲ್ಲಿ ಖರ್ಚು ಮತ್ತು ರಾಸಾಯನಿಕ ಬಳಕೆ ಕಡಿಮೆ ಮಾಡಬೇಕು. ಜೈವಿಕ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ರೇಷ್ಮೆ ಉಪನಿರ್ದೇಶಕ ಸಿ.ಡಿ.ಬಸವರಾಜು ಮಾತನಾಡಿ, ರೇಷ್ಮೆ ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಳ್ಳಬೇಕು. ಹುಳು ಸಾಕಾಣಿಕೆ ಮತ್ತು ತೋಟ ನಿರ್ವಹಣೆಯಲ್ಲಿ ಇಲಾಖೆ ಮಾರ್ಗದರ್ಶನ ಪಡೆಯಬೇಕು ಎಂದರು.
ರೇಷ್ಮೆ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಮಳ್ಳೂರು ಶಿವಣ್ಣ ಮಾತನಾಡಿ, ರೇಷ್ಮೆ ಕೃಷಿಯಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ರೇಷ್ಮೆ ಬೆಲೆ ಕಡಿಮೆಯಾಗಿದೆ. ಬೆಳೆ ಇಳುವರಿ ಕುಂಟಿತಗೊಂಡಿದೆ ಎಂದರು.
ನಿವೃತ್ತ ವಿಜ್ಞಾನಿಗಳಾದ ಡಾ.ಸುಬ್ರಮಣ್ಯ ಮತ್ತು ಡಾ.ಆದಮನಿ ಬೆಳೆ ಮಾಡಲು ಮಣ್ಣಿನ ಫಲವತ್ತತೆ ಹೇಗಿರಬೇಕು, ತೋಟದ ನಿರ್ವಹಣೆ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ, ರೇಷ್ಮೆ ಸಹಾಯಕ ನಿರ್ದೇಶಕ ಮುತ್ತುರಾಜು ದ್ವಿತಳಿ ರೇಷ್ಮೆ ಬೆಳೆ ಮಾಡುವುದರಿಂದ ಏನು ಲಾಭ ಮತ್ತು ರೇಷ್ಮೆ ಕೃಷಿ ಹೇಗೆ ಲಾಭದಾಯ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿಕೊಟ್ಟರು.
ಸಾತನೂರು, ಉಯ್ಯಂಬಳ್ಳಿ, ಕೋಡಿಹಳ್ಳಿ ಹೋಬಳಿ ವ್ಯಾಪ್ತಿಯ 300ಕ್ಕೂ ಹೆಚ್ಚು ರೇಷ್ಮೆ ದ್ವಿತಳಿ ಬೆಳೆ ಮಾಡುವ ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ರೇಷ್ಮೆ ವಿಸ್ತರಣಾಧಿಕಾರಿಗಳಾದ ಕೆ.ಎಸ್.ರಾಜು, ಮಂಜುನಾಥ್, ರೇಷ್ಮೆ ನಿರೀಕ್ಷಕರಾದ ಕುಮಾರಸ್ವಾಮಿ, ಗೌರಿ, ರೇಷ್ಮೆ ಪ್ರದರ್ಶಕ ಚೇತನ್, ಮುಖಂಡರಾದ ಕುಳ್ಳೀರೇಗೌಡ, ಕೆ.ಎಂ.ಮಾದೇಶ್, ರೇಷ್ಮೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಡಿ.ಕೆ.ರಾಮಕೃಷ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.