ಮಾಗಡಿ: ಗಾಂಧೀಜಿ ಚಿಂತನೆ ಪ್ರೀತಿ, ಕರುಣೆ, ತಾಯ್ತನ ಹಾಗೂ ನೈತಿಕ ನೋಟಗಳಿಂದ ಕೂಡಿದೆ. ಸತ್ಯ ಸಾರುವ ಸಂದೇಶಗಳಾಗಿವೆ ಎಂದು ’ನಮ್ಮ ಕರ್ನಾಟಕ ನವ ನಿರ್ಮಾಣ ವೇದಿಕೆ‘ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಎಚ್.ಆರ್.ಗೋದಾವರಿ ರಂಗಸ್ವಾಮಿ ತಿಳಿಸಿದರು.
ಪಟ್ಟಣದ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ನವಜೀವನ ಸಮಿತಿ, ಜಿಲ್ಲಾ ಜಾಗೃತಿ ವೇದಿಕೆ ಸಹಯೋಗದಲ್ಲಿ ಬುಧವಾರ ನಡೆದ 151ನೇ ಗಾಂಧಿ ಸ್ಮೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಾಪೂಜಿ ಕಷ್ಟದ ದಾರಿ ಮೂಲಕ ಸರ್ವರ ಸುಖದ ನೆಲೆ ಕಾಣಲು ಮುಂದಾಗಿದ್ದರು. ಹೋರಾಟದ ಮೂಲಕ ಉಪವಾಸ ಎಂಬ ನೈತಿಕ ಅಸ್ತ್ರ ಹಿಡಿದು ಜನರಲ್ಲಿ ಹೋರಾಟದ ಮನೋಭೂಮಿಕೆ ಬೆಳೆಸಿದ್ದರು. ಮಾನವ ಮನಸ್ಸು ಬೆಸೆಯುವ ತುಡಿತದ ಜತೆಗೆ ಹೊಸ ಜಗತ್ತು ಕಟ್ಟುವ ಕನಸಿನಿಂದಲೂ ಬಾಪೂಜಿ ಅವರ ಚಿಂತನೆ ಸರ್ವರಲ್ಲೂ ಪ್ರೇರಣೆ ಮೂಡಿಸಿದೆ. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಮಾನುಷ ಘಟನೆಗಳು ಗಾಂಧೀಜಿ ಅವರ ಚಿಂತನೆಯಡಿ ಶಾಂತಿಯುತವಾಗಿ ಪ್ರತಿಭಟಿಸಬೇಕಿದೆ ಎಂದರು.
ನಮ್ಮ ಕರ್ನಾಟಕ ನವ ನಿರ್ಮಾಣ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷೆ ಅನಿತಾ.ಕೆ.ರಂಗನಾಥ ಮಾತನಾಡಿ, ಗಾಂಧೀಜಿ ರೂಪಿಸಿದ್ದ ಹಿಂಸೆ, ಸ್ವರಾಜ್ಯ, ಸಹಕಾರ, ಮದ್ಯಪಾನ ನಿಷೇಧ ಕಾರ್ಯಕ್ರಮ ಎಲ್ಲ ಕಾಲಕ್ಕೂ ಸಲ್ಲುತ್ತದೆ ಎಂದರು.
ತಿರುಮಲೆ ಮುಳಕಟ್ಟಮ್ಮ ದೇವಾಲದಯ ಪೂಜಾರಿ ಟಿ.ಎಂ.ಶ್ರೀನಿವಾಸ್ ಮಾತನಾಡಿ, ಸಮುದಾಯದ ಸಹಬಾಳ್ವೆ ಕಲಿಸಿಕೊಟ್ಟಿರುವ ಗಾಂಧೀಜಿ ಅವರ ಆದರ್ಶ ಮಸುಕಾಗದಂತೆ ಎಚ್ಚರ ವಹಿಸಬೇಕಿದೆ. ಮದ್ಯಪಾನ ನಿಷೇಧದ ಬಗ್ಗೆ ಜನರು ಹಕ್ಕೋತ್ತಾಯ ಮಾಡಬೇಕಿದೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಶಶಿಲಾ ಸುವರ್ಣ ಮಾತನಾಡಿ, ಭಾರತದ ಪ್ರತಿಯೊಂದು ಪ್ರಾಂತ್ಯವೂ ರಾಮರಾಜ್ಯವಾಗಬೇಕು ಎಂದು ಕನಸು ಕಂಡಿದ್ದ ಗಾಂಧೀಜಿ ಅವರನ್ನು ನೇಪಥ್ಯಕ್ಕೆ ಸರಿಸುವುದು ಸರಿಯಲ್ಲ ಎಂದರು.
ವಲಯ ಮೇಲ್ವಿಚಾರಕರಾದ ಮನೋಜ್ ಹೆಗಡೆ, ಸಿದ್ದಯ್ಯ, ನಾಗಮಣಿ, ನವಜೀವನ ಸಮಿತಿ ಯೋಗೇಶ್ ಮಾತನಾಡಿದರು.