ರಾಮನಗರ: ‘ದಿವಂಗತ ಎಚ್.ಎಲ್. ನಾಗೇಗೌಡರ ಸ್ಮರಣಾರ್ಥ ಜಾನಪದ ಲೋಕದಲ್ಲಿ ಲೋಕಸಿರಿ ಕಾರ್ಯಕ್ರಮವನ್ನು ಪ್ರತಿ ತಿಂಗಳ ಎರಡನೇ ಶನಿವಾರ ಹಮ್ಮಿಕೊಳ್ಳಲಾಗುತ್ತಿದ್ದು, ಇದೀಗ 64ರತ್ತ ಹೆಜ್ಜೆ ಇಟ್ಟಿರುವುದು ಹೆಮ್ಮೆಯ ವಿಚಾರ’ ಎಂದು ಜಾನಪದ ಲೋಕದ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ತಿಳಿಸಿದರು.
ನಗರ ಹೊರವಲಯದಲ್ಲಿರುವ ಜಾನಪದ ಲೋಕದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕಸಿರಿ- ತಿಂಗಳ ಅತಿಥಿ ಕಾರ್ಯಕ್ರಮವನ್ನು ಸಂಬಾಳ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ನಾಡಿನುದ್ದಕ್ಕೂ ಇರುವ ಜಾನಪದ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ನಾಡೋಜ ಎಚ್.ಎಲ್. ನಾಗೇಗೌಡರು ಜಾನಪದ ಲೋಕ ಸ್ಥಾಪಿಸಿದರು ಎಂದು ನುಡಿದರು.
ಹೃದ್ರೋಗ ತಜ್ಞ ಡಾ.ಶಿವಕುಮಾರ್ ಮಾತನಾಡಿ, ಗ್ರಾಮೀಣ ಸೊಗಡಿನ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಜಾನಪದ ಲೋಕವು ತನ್ನದೇ ಆದ ರೀತಿಯಲ್ಲಿ ಸಾರ್ಥಕಾದ ಸೇವೆ ಸಲ್ಲಿಸುತ್ತಿದೆ ಎಂದು ಬಣ್ಣಿಸಿದರು.
ಲೋಕಸಿರಿಯ ತಿಂಗಳ ಅತಿಥಿ ಸಂಬಾಳ ಕಲಾವಿದ ಮಲ್ಲಪ್ಪ ಬಾಳಪ್ಪ ಹೂಗಾರ ತಮ್ಮ ಪುತ್ರ ಹನುಮಂತ ಹೂಗಾರ ಜೊತೆಗೂಡಿ ಸಂಬಾಳ ಬಾರಿಸುವ ಮೂಲಕ ಕಲಾಸಕ್ತರು ಹಾಗೂ ಜಾನಪದ ಲೋಕದ ಪ್ರವಾಸಿಗರ ಮನಸೂರೆಗೊಂಡರು.
ಜಾನಪದ ಲೋಕದ ಮುಖ್ಯ ಆಡಳಿತಾಧಿಕಾರಿ ಸಿ.ಎನ್. ರುದ್ರಪ್ಪ, ಕ್ಯೂರೇಟರ್ ಡಾ.ರವಿ, ರಂಗ ಶಿಕ್ಷಕ ಪ್ರದೀಪ್ ಜಕ್ಕನಹಳ್ಳಿ, ಜಾನಪದ ಲೋಕದ ಸಿಬ್ಬಂದಿ ಹಾಗೂ ಆಸಕ್ತರು ಇದ್ದರು.