ಇನ್ಸ್ಪೆಕ್ಟರ್ ನಂದೀಶ್ ಸಾವು | ನ್ಯಾಯಸಮ್ಮತ ತನಿಖೆ: ಅಶ್ವತ್ಥನಾರಾಯಣ

ರಾಮನಗರ: ಇನ್ಸ್ಪೆಕ್ಟರ್ ನಂದೀಶ್ ಸಾವು ಸ್ವಾಭಾವಿಕ ಆಗಿದ್ದು, ಅದಕ್ಕೆ ಬೇರೆ ಬಣ್ಣ ಕಲ್ಪಿಸುವುದು ಬೇಡ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು
ನಂದೀಶ್ ₹70–80 ಲಕ್ಷ ಕೊಟ್ಟು ಈ ಹುದ್ದೆಗೆ ಬಂದಿದ್ದರು ಎಂಬ ಸಚಿವ ಎಂಟಿಬಿ ನಾಗರಾಜು ಹೇಳಿಕೆ ಕುರಿತು ಅವರು ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದರು.
‘ನಂದೀಶ್ ಕುರಿತು ಎಂಟಿಬಿ ನಾಗರಾಜು ಮುಕ್ತವಾಗಿ ಮಾತನಾಡಿದ್ದಾರೆ. ಹಿಂದೆ ಕಾಂಗ್ರೆಸ್ನಲ್ಲಿ ಆ ರೀತಿ ವ್ಯವಸ್ಥೆ ಇತ್ತು. ಆದರೆ ಈಗಿನ ಸರ್ಕಾರದಲ್ಲಿ ಇಲ್ಲ. ಮುಖ್ಯಮಂತ್ರಿಗಳು ಈಗಾಗಲೇ ಉನ್ನತ ತನಿಖೆಗೆ ಆದೇಶಿಸಿದ್ದು, ನ್ಯಾಯಸಮ್ಮತ ತನಿಖೆ ನಡೆಯಲಿದೆ’ ಎಂದರು.
‘ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಸಮ್ಮತ ತನಿಖೆ ನಡೆಯಲಿದೆ. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದು
ಪ್ರತಿಕ್ರಿಯಿಸಿದರು.
ಈ ಬಾರಿ ಸಚಿವ ಸಂಪುಟ ರಚನೆ ಹಾಗೂ ಸಿ.ಪಿ. ಯೋಗೇಶ್ವರ್ಗೆ ಅವಕಾಶ ಕುರಿತು ಮಾತನಾಡಿ ‘ಯೋಗೇಶ್ವರ್ಗೆ ಒಳ್ಳೆಯದಾಗಬೇಕು. ಹೀಗಾಗಿ ಅವಕಾಶ ಸಿಗಬಹುದು’
ಎಂದರು.
‘ಹೊಸ ಜಿಲ್ಲಾಸ್ಪತ್ರೆ ಕಾಮಗಾರಿಯನ್ನು ನವೆಂಬರ್ 30ರ ಒಳಗೆ ಮುಗಿಸಲು ಸೂಚಿಸಿದ್ದು, ನಂತರ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗುವುದು. ರಾಜೀವ್ ಗಾಂಧಿ ವಿ.ವಿ ಕ್ಯಾಂಪಸ್ ನಿರ್ಮಾಣ ಸಂಬಂಧ ಆಡಳಿತಾತ್ಮಕ ಅನುಮೋದನೆ ದೊರೆಯಬೇಕು. ಇದಕ್ಕಾಗಿ ಕಾಯುತ್ತಿದ್ದೇವೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.