ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: 10, 11ಕ್ಕೆ ಜಾನಪದ ಲೋಕೋತ್ಸವ

ವೈವಿಧ್ಯಮಯ ಜಾನಪದ ಕಲೆ ಪ್ರದರ್ಶನ; ವಿಚಾರ ಸಂಕಿರಣ
Published 7 ಫೆಬ್ರುವರಿ 2024, 14:09 IST
Last Updated 7 ಫೆಬ್ರುವರಿ 2024, 14:09 IST
ಅಕ್ಷರ ಗಾತ್ರ

ರಾಮನಗರ: ‘ನಗರದ ಹೊರವಲಯದ ಜಾನಪದ ಲೋಕದಲ್ಲಿ ಫೆ. 10–11ರಂದು ಕರ್ನಾಟಕ ಜಾನಪದ ಪರಿಷತ್ತು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ–2024 ನಡೆಯಲಿದೆ. ಕಲಾ ಪ್ರದರ್ಶನ, ಗೀತ ಗಾಯನ, ಪ್ರಶಸ್ತಿ ಪ್ರದಾನ, ದೇಸಿ ಮೇಳ ಹಾಗೂ ವಿಚಾರ ಸಂಕಿರಣದ ಹೂರಣ ಲೋಕೋತ್ಸವದ ವಿಶೇಷವಾಗಿದೆ’ ಎಂದು ಪರಿಷತ್ತಿನ ಕಾರ್ಯಾಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಹೇಳಿದರು.

‘ನಿವೃತ್ತ ಐಎಎಸ್ ಅಧಿಕಾರಿ ಐ.ಎಂ. ವಿಠ್ಠಲಮೂರ್ತಿ ಅವರು ಫೆ. 10ರಂದು ಬೆಳಿಗ್ಗೆ 10.30ಕ್ಕೆ ಲೋಕೋತ್ಸವ ಉದ್ಘಾಟಿಸಲಿದ್ದಾರೆ. ರಾಮನಗರದ ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಲಿದ್ದಾರೆ. ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ’ ಎಂದು ಜಾನಪದ ಲೋಕದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕರಕುಶಲ ಮೇಳವನ್ನು ಬುಡಕಟ್ಟು ಸಮುದಾಯದ ಚಿಂತಕ,  ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೋಮಣ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ. ಧರಣಿದೇವಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಎಸ್‌ಪಿ ಕಾರ್ತಿಕ್ ರೆಡ್ಡಿ, ಜಿ.ಪಂ. ಸಿಇಒ ದಿಗ್ವಿಜಯ್ ಬೋಡ್ಕೆ ಭಾಗವಹಿಸಲಿದ್ದಾರೆ’ ಎಂದರು.

ಯುವ ಜನೋತ್ಸವ ಸ್ಪರ್ಧೆ: ‘ಮಧ್ಯಾಹ್ನ 2 ಗಂಟೆಗೆ ರಾಜ್ಯಮಟ್ಟದ ಜನಪದ ಕಲೆಗಳ ಯುವ ಜನೋತ್ಸವ ಸ್ಪರ್ಧೆ ಜರುಗಲಿದೆ. ಪರಿಷತ್ತಿನ ಮಾಜಿ ಅಧ್ಯಕ್ಷ ಟಿ. ತಿಮ್ಮೇಗೌಡ ಚಾಲನೆ ನೀಡಲಿದ್ದಾರೆ. ಸಂಜೆ 5.30ಕ್ಕೆ ಜನಪದ ಗೀತ ವೈವಿಧ್ಯ, ಪೂಜಾ ಕುಣಿತ, ಹುಲಿ ವೇಷ, ಜಡೆ ಕೋಲಾಟ, ಲಂಬಾಣಿ ನೃತ್ಯ, ವೀರಭದ್ರನ ಕುಣಿತ, ತಮಟೆ ಜುಗಲ್‌ಬಂದಿ, ಚಿಣ್ಣರ ಜನಪದ ವೈವಿಧ್ಯ ಹಾಗೂ ಪಟ ಕುಣಿತದ ಕಲಾ ಪ್ರದರ್ಶನ ಜರುಗಲಿದೆ’ ಎಂದು ಹೇಳಿದರು.

‘ಫೆ. 11ರಂದು ಸಂಜೆ 7ರಿಂದ ಜನಪದ ಗೀತ ವೈವಿಧ್ಯ, ಕಿನ್ನರಿ ಜೋಗಿ ಪದಗಳು, ಏಕತಾರಿ ಪದಗಳು, ಗೀಗೀ ಪದ, ಬುಲಾಯಿ ಪದಗಳು, ಡೊಳ್ಳು ಕುಣಿತ, ಸೋಮನ ಕುಣಿತ, ಗೊರವರ ಕುಣಿತ, ಕಂಸಾಳೆ, ಪಟ ಕುಣಿತ, ತಂಬೂರಿ ಪದಗಳ ಕಲಾ ಪ್ರದರ್ಶನ ಇರುತ್ತದೆ. ಸ್ಥಳೀಯ ಹಾಗೂ ರಾಜ್ಯದ ವಿವಿಧ ಭಾಗಗಳ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ’ ಎಂದರು.

‘ಲೋಕೋತ್ಸವ ನಡೆಯುವ ಎರಡೂ ದಿನ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ಮತ್ತು ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಕಲಾವಿದರಿಂದ ಜನಪದ ನೃತ್ಯ ಪ್ರದರ್ಶನ ಇರಲಿದೆ. ಜೊತೆಗೆ ರಾಜ್ಯ ಕಲಾ ತಂಡಗಳಿಂದ ಪ್ರದರ್ಶನ, ಕರಕುಶಲ ಮತ್ತು ದೇಶಿ ಮೇಳದ ಪ್ರಾತ್ಯಕ್ಷಿಕೆ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಗಾರುಡಿ ಗೊಂಬೆ, ಕೋಲೆ ಬಸವ, ಪೆಟ್ಟಿಗೆ ಮಾರಮ್ಮ, ದಾಸಪ್ಪ–ಜೋಗಪ್ಪ, ಕೊಂಬು–ಕಹಳೆ ಬಳೆ ಮಲ್ಲಾರ ಇತ್ಯಾದಿ ಕಲೆಗಳು ಲೋಕೋತ್ಸವದ ವಿಶೇಷವಾಗಿರಲಿವೆ’ ಎಂದು ಮಾಹಿತಿ ನೀಡಿದರು.

ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಜಾನಪದ ಲೋಕದ ಕ್ಯುರೇಟರ್ ಡಾ. ಯು.ಎಂ. ರವಿ ಇದ್ದರು.

ವಿಚಾರ ಸಂಕಿರಣ

ಫೆ. 11ರಂದು ಬೆಳಿಗ್ಗೆ 10 ಗಂಟೆಗೆ ‘ಕನ್ನಡ ಜಾನಪದ: ಪುನರಾವಲೋಕನ’ ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಆಶಯ ನುಡಿಗಳನ್ನಾಡಲಿದ್ದಾರೆ. ಜಾನಪದ ವಿದ್ವಾಂಸ ಚಕ್ಕರೆ ಶಿವಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ.

‘ಜಾನಪದ ಸಾಹಿತ್ಯ: ಪುನರಾವಲೋಕನ’ ವಿಷಯ ಕುರಿತು ಜಾನಪದ ಸಂಶೋಧಕಿ ಡಾ. ಗಾಯತ್ರಿ ನಾವಡ ಮತ್ತು ‘ಜನಪದ ಪ್ರದರ್ಶಕ ಕಲೆ: ಪುನರಾಲೋಕನ’ ಕುರಿತು ಜಾನಪದ ದಾಖಲೀಕರಣ ತಜ್ಞ ಡಾ. ಸಿರಿಗಂಧ ಶ್ರೀನಿವಾಸಮೂರ್ತಿ ವಿಚಾರ ಮಂಡಿಸಲಿದ್ದಾರೆ. ನಂತರ ಅತಿಥಿಗಳೊಂದಿಗೆ ಸಂವಾದ ನಡೆಯಲಿದೆ.

ಸಂಶೋಧನಾ ಕೇಂದ್ರ ಉದ್ಘಾಟನೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಡಾ. ಎಚ್‌.ಎಲ್. ನಾಗೇಗೌಡ ಜಾನಪದ ಸಂಶೋಧನಾ ಕೇಂದ್ರದ ಉದ್ಘಾಟನೆ ಹಾಗೂ ಸಂಶೋಧನಾ ಫಲಿತಗಳ ಬಿಡುಗಡೆ ಫೆ. 11ರಂದು ಸಂಜೆ 5ಕ್ಕೆ ಜರುಗಲಿದೆ.

ಪರಿಷತ್ತಿನ ಮಹಾ ಪೋಷಕರಾದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಸಂಜೆ 5.30ಕ್ಕೆ ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆಯಾದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT