ಕನಕಪುರ: ಮಾಜಿ ಪ್ರಧಾನಿ ತಮ್ಮ ಕುಟುಂಬದ ರಕ್ಷಣೆಗಾಗಿ, ಭವಿಷ್ಯಕ್ಕಾಗಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಸಂಸದ ಡಿ.ಕೆ. ಸುರೇಶ್ ಅವರನ್ನು ಸೋಲಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ಆರೋಪಿಸಿದ್ದಾರೆ.
ಪಟ್ಟಣದ ಮಳಗಾಳು ರಸ್ತೆಯ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಡಿಸಿಸಿ ಬ್ಯಾಂಕಿನಿಂದ ಸೋಮವಾರ ಏರ್ಪಡಿಸಿದ್ದ ಕೆಸಿಸಿ ಬೆಳೆಸಾಲ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದೇವೇಗೌಡರು ಈ ವಯಸ್ಸಿನಲ್ಲಿ ಕೋಮುವಾದಿ ಪಕ್ಷವಾಗಿರುವ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿ ಆದರೆ ದೇಶಬಿಡುತ್ತೇನೆ ಎಂದು ಹೇಳಿದ್ದವರು. ಈಗ ಅದೇ ಬಾಯಿಂದ ಮೋದಿ ಅವರನ್ನು ಹೊಗಳುತ್ತಿದ್ದಾರೆ. ಸಂಸದ ಡಿ.ಕೆ.ಸುರೇಶ್ ಅವರು ದಣಿವರಿಯದೆ ಕ್ಷೇತ್ರದ ಜನತೆಗಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಬೇಕೆಂಬ ಲೆಕ್ಕಾಚಾರ ನಡೆಯುತ್ತಿದೆ’ ಎಂದರು.
ತಾಲ್ಲೂಕಿನ ರೈತರಿಗಾಗಿ ಹೆಚ್ಚುವರಿಯಾಗಿ 1,698 ಮಂದಿಗೆ ₹ 21,65,000 ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ಬಿಡಿಸಿಸಿ ಬ್ಯಾಂಕಿನಿಂದ ಸೊಸೈಟಿಗಳ ಮೂಲಕ ಮಂಜೂರು ಮಾಡಲಾಗಿದೆ. ಇದು ಡಿಸಿಎಂ ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರಿಂದ ಸಾಧ್ಯವಾಯಿತು. ಇಲ್ಲಿಂದ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆಯಾಗಿದ್ದ ಚಂದ್ರಶೇಖರ್ಮೂರ್ತಿ, ದೇವೇಗೌಡ, ಎಂ.ಶ್ರೀನಿವಾಸ್, ಕುಮಾರಸ್ವಾಮಿ, ತೇಜಸ್ವಿನಿ ಅವರನ್ನು ಕ್ಷೇತ್ರದ ಜನರು ಒಂದು ದಿನವೂ ನೋಡಿರಲಿಲ್ಲ’ ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕ ವಿಜಯದೇವ್ ಮಾತನಾಡಿ, ಸಾಲ ಮನ್ನಾ ಯೋಜನೆಯಲ್ಲಿ ರಾಜ್ಯದ 25 ಸಾವಿರ ರೈತರ ಸಾಲ ಮನ್ನಾ ಬಾಕಿ ಉಳಿದಿತ್ತು, ಅದನ್ನು ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಮನ್ನಾ ಮಾಡಿಸಲಾಗಿದೆ ಎಂದರು.
ಕನಕಪುರ ತಾಲ್ಲೂಕಿನಲ್ಲಿ ಒಟ್ಟು 24 ಸೊಸೈಟಿಗಳಿಗೆ ಮಂಜುರಾದ ಹಣವನ್ನು ಸಾಂಕೇತಿಕವಾಗಿ ಸೊಸೈಟಿಗಳಿಗೆ ಮಂಜೂರಾತಿಯ ಆದೇಶ ಪತ್ರವನ್ನು ವಿತರಣೆ ಮಾಡಲಾಯಿತು.
ಬಿಡಿಸಿಸಿ ಬ್ಯಾಂಕ್ ಕೇಂದ್ರ ಶಾಖೆಯ ಡಿಜಿಎಂ ಸುರೇಶ್, ಕನಕಪುರ ಶಾಖೆಯ ಎಜಿಎಂ ಕಿರಣ್ ಕುಮಾರ್ ಮೇಲ್ವಿಚಾರಕ ವಿ.ಕೆ. ಯೋಗೇಶ್, ಕುಡಿಲಿ ಶಾಖೆಯ ಮೇಲ್ವಿಚಾರಕ ವಿಜಯ್ ಜಿ., ಹಾರೋಹಳ್ಳಿ ಮೇಲ್ವಿಚಾರಕ ಅಶೋಕ್, ಸೇರಿದಂತೆ ಸೊಸೈಟಿ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.