ಕನಕಪುರ: ತಾಲ್ಲೂಕಿನ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳನ್ನು ವನ್ಯಜೀವಿ ಅರಣ್ಯ ಪ್ರದೇಶ ಮುತ್ತತ್ತಿಗೆ ಓಡಿಸಲು ಅರಣ್ಯ ಇಲಾಖೆ ಸಾಕಿದ ಆನೆಗಳ ಮೂಲಕ ಕಾರ್ಯಾಚರಣೆಗೆ ಗುರುವಾರ ಚಾಲನೆ ನೀಡಿದರು.
ಕಬ್ಬಾಳು ಅರಣ್ಯ ಪ್ರದೇಶ ಸೇರಿದಂತೆ ತೆಂಗಿನಕಲ್ಲು ಬೆಟ್ಟ, ಚನ್ನಪಟ್ಟಣದಲ್ಲಿ ಸುಮಾರು 25 ಕಾಡಾನೆಗಳು ಸೇರಿಕೊಂಡಿವೆ. ನಿರಂತರವಾಗಿ ರೈತರ ಜಮೀನು ಮೇಲೆ ದಾಳಿ ಮಾಡಿ ರೈತರ ಫಸಲು ನಾಶ ಮಾಡುತ್ತಿದ್ದವು. ಇದು ರೈತರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆ ನೋವಾಗಿತ್ತು.
ಈ ಭಾಗದಲ್ಲಿ ಸೇರಿಕೊಂಡು ರೈತರಿಗೆ ತೊಂದರೆ ಕೊಡುವುದಲ್ಲದೆ ಜೀವ ಹಾನಿಗೆ ಕಾರಣವಾಗಿರುವ ಕಾಡಾನೆಗಳನ್ನು ಶಾಶ್ವತವಾಗಿ ಕಾಡಿಗೆ ಓಡಿಸಬೇಕೆಂದು ರೈತರು ಒತ್ತಾಯಿಸಿ ಹಲವು ಭಾರಿ ಪ್ರತಿಭಟನೆ ನಡೆಸಿದ್ದರು.
ರೈತರ ಒತ್ತಾಯಕ್ಕೆ ಮಣಿದಿರುವ ಅರಣ್ಯ ಇಲಾಖೆ ಸಾತನೂರು ವಲಯ, ಚನ್ನಪಟ್ಟಣ ವಲಯ, ರಾಮನಗರ ವಲಯದ ಮೂವರು ಅಧಿಕಾರಿಗಳು ಗುರುವಾರ ಏಳು ಸಾಕಿದ ಆನೆಗಳನ್ನು ಕರೆತಂದು ಕಾಡಾನೆ ಓಡಿಸುವ ಕಾರ್ಯಾಚರಣೆಗೆ ಚಾಲನೆ ನೀಡಿದರು.