ಚನ್ನಪಟ್ಟಣ: ಕನ್ನಡ ಸಾಹಿತ್ಯ ಪರಿಷತ್ ಕಟ್ಟಿ ಕನ್ನಡದ ಕಂಪು ಎಲ್ಲೆಡೆ ಪಸರಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜು ತಿಳಿಸಿದರು.
ಪಟ್ಟಣದ ಕಸಾಪ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಹಲವು ಕನ್ನಡಪರ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಸುದೀರ್ಘ ಇತಿಹಾಸವಿರುವ ಕನ್ನಡ ಭಾಷೆ ಅನನ್ಯ ಮತ್ತು ಅಜರಾಮರವಾದುದು. ಆಡುವುದಕ್ಕೂ, ಕೇಳುವುದಕ್ಕೂ ಮಧುರವಾಗಿರುವ ಭಾಷೆ. ಈ ಭಾಷೆಯಲ್ಲಿ ಸಮೃದ್ಧತೆ ಅಡಗಿದೆ. ಕನ್ನಡಿಗರು ಕನ್ನಡವನ್ನು ಬೆಳೆಸಲು ಮುಂದಾಗಬೇಕು. ಆಂಗ್ಲಭಾಷಾ ವ್ಯಾಮೋಹದಿಂದ ದೂರ ಉಳಿಯಬೇಕೆಂದು ಎಂದು ಮನವಿ ಮಾಡಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮತ್ತೀಕೆರೆ ಬಿ.ಚಲುವರಾಜು ಮಾತನಾಡಿ, ಕನ್ನಡ ಭಾಷೆ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪ ಕನ್ನಡ ಭಾಷೆ ಬೆಳವಣಿಗೆಗೆ ಅರ್ಥಪೂರ್ಣವಾದ ಕೊಡುಗೆ ನೀಡುತ್ತಿದೆ. ಪ್ರಾಚೀನ ಕಾಲದ ಕನ್ನಡ ಸಾಹಿತ್ಯವನ್ನು ಹೊಸದಾಗಿ ಮರುಮುದ್ರಣ ಮಾಡಿ ಎಲ್ಲರಿಗೂ ಸಿಗುವಂತೆ ಮಾಡಿದೆ. ನೆರೆ ರಾಜ್ಯಗಳಲ್ಲಿ ಇಂಥ ಸಂಸ್ಥೆ ಇಲ್ಲ ಎಂದು ಅಭಿಪ್ರಾಯಪಟ್ಟರು.
ವಿಚಾರವಾದಿ ಅಪ್ಪಾಜಿಗೌಡ, ಸಾಹಿತ್ಯ ಪರಿಚಾರಕ ಸಿ.ಕೆ.ಹರೀಶ್, ಭರತೇಶ್, ತಾಲ್ಲೂಕು ಕಸಾಪ ಕಾರ್ಯದರ್ಶಿ ಮಂಜೇಶ್ ಬಾಬು, ಕೋಶಾಧ್ಯಕ್ಷ ಶ್ರೀನಿವಾಸ ರಾಂಪುರ, ಕವಿ ನಾರಾಯಣಮೂರ್ತಿ, ಪರಾಸ್ ಇದ್ದರು.