ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಭೋಗನಂಜಪ್ಪನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಕಟ್ಟಡ ನಿರ್ಮಾಣ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಸಾಲ ನೀಡಿದ್ದ ಹಣಕಾಸು ಸಂಸ್ಥೆ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಮೃತನ ಪತ್ನಿ ಆರೋಪಿಸಿದ್ದಾರೆ.
ಹೊನ್ನಯ್ಯ (41) ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ. ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಮನೆ ನಿರ್ಮಾಣಕ್ಕೆ ಮೂರು ವರ್ಷದ ಹಿಂದೆ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ₹6.85 ಲಕ್ಷ ಮನೆ ಸಾಲ ಪಡೆದಿದ್ದರು. ಫೈನಾನ್ಸ್ನವರು ₹1.15 ಲಕ್ಷ ವಿಮೆ ಮೊತ್ತವನ್ನು ಮುಂಗಡ ಕಡಿತ ಮಾಡಿ ಉಳಿದ ₹6.85 ಲಕ್ಷ ಕೊಟ್ಟಿದ್ದರು.
ಪ್ರತಿ ತಿಂಗಳು ಫೈನಾನ್ಸ್ನವರು ಮನೆಗೆ ಬಂದು ಸಾಲದ ಕಂತು ಕಟ್ಟಿಸಿಕೊಳ್ಳುತ್ತಿದ್ದರು. ಕಳೆದ ಆರು ತಿಂಗಳಿಂದ ಸರಿಯಾಗಿ ಕೆಲಸ ಇಲ್ಲದ ಕಾರಣ ಸಾಲದ ಕಂತು ಪಾವತಿಸಿರಲಿಲ್ಲ ಎಂದು ತಿಳಿದು ಬಂದಿದೆ.
‘ಸಾಲ ಕಟ್ಟದಿದ್ದರೆ ಅರೆಸ್ಟ್ ಆಗುತ್ತೀರಾ. ಮನೆಯ ಜಾಗ ವಶಪಡಿಸಿಕೊಳ್ಳಲಾಗುವುದು ಎಂದು ಬೆದರಿಸುತ್ತಿದ್ದರು’ ಎಂದು ಕಂತು ಪಡೆಯಲು ಮನೆಗೆ ಬರುತ್ತಿದ್ದ ಹಣಕಾಸು ಸಂಸ್ಥೆ ಸಿಬ್ಬಂದಿ ಬೆದರಿಕೆ ಹಾಕುತ್ತಿದ್ದರು ಎಂದು ಮೃತರ ಪತ್ನಿ ಜಯರತ್ನಮ್ಮ ಕೊಡಿಗೇಹಳ್ಳಿ ಠಾಣೆಗೆ ಕೊಟ್ಟ ದೂರಿನಲ್ಲಿ ತಿಳಿಸಿದ್ದಾರೆ.
‘ಮೇ 27ರಂದು ಹಣಕಾಸು ಸಂಸ್ಥೆ ಸಿಬ್ಬಂದಿ ಬಂದು ಎಚ್ಚರಿಕೆ ನೀಡಿ ಹೋಗಿದ್ದರು. ಇದರಿಂದ ಬೇಸತ್ತ ಪತಿ ಬೆಳಗ್ಗಿನ ಜಾವ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಅವರ ಸಾವಿಗೆ ಹಣಕಾಸು ಸಂಸ್ಥೆಯವರ ಕಿರುಕುಳವೇ ಕಾರಣ’ ಎಂದು ಅವರು ಆರೋಪ ಮಾಡಿದ್ದಾರೆ.
ಮೃತರ ಪತ್ನಿಯ ದೂರು ಆಧರಿಸಿ ಫೈನಾನ್ಸ್ ಸಂಸ್ಥೆಯ ಕನಕಪುರ ಶಾಖೆಯ ವ್ಯವಸ್ಥಾಪಕ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.