ರಾಮನಗರ: ತಾಲ್ಲೂಕಿನ ಕೂನಗಲ್ ಗ್ರಾಮದ ಜಮೀನಿನಲ್ಲಿ ಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿ ಮಂಗಳವಾರ ಚಿರತೆಯೊಂದು ಮೃತಪಟ್ಟಿತು.
ಎರಡು ವರ್ಷ ಪ್ರಾಯದ ಗಂಡು ಚಿರತೆ ಆಹಾರ ಅರಸಿ ಜಮೀನಿಗೆ ಬಂದಿದ್ದು, ಈ ವೇಳೆ ಉರುಳಿಗೆ ಸಿಲುಕಿತು. ಅದರ ಚೀರಾಟ ಕೇಳಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಆ ಸಂದರ್ಭ ಚಿರತೆ ಜೀವಂತ ಇತ್ತು.
ಸ್ಥಳೀಯವಾಗಿ ಅರವಳಿಕೆ ತಜ್ಞರು ಲಭ್ಯರಿಲ್ಲದ ಕಾರಣ ಬನ್ನೇರುಘಟ್ಟದಿಂದ ತಜ್ಞರನ್ನು ಕರೆಯಿಸುವುದು ತಡವಾಯಿತು. ಹೊಟ್ಟೆ ಭಾಗದಲ್ಲಿ ಉರುಳಿನ ಹಿಡಿತ ಬಿಗಿಯಾಗಿ ಚಿರತೆಯು ವೈದ್ಯರು ಬರುವ ವೇಳೆಗೆ ಸಾವನ್ನಪ್ಪಿತು.
ಪಶು ವೈದ್ಯಾಧಿಕಾರಿಗಳು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಅಂತ್ಯಕ್ರಿಯೆ ನೆರವೇರಿಸಿದರು. ಸ್ಥಳೀಯವಾಗಿ ಅರವಳಿಕೆ ತಜ್ಞರು ಲಭ್ಯರಿದ್ದರೆ ಚಿರತೆಯನ್ನು ರಕ್ಷಿಸಬಹುದಿತ್ತು. ಮುಂದಾದರೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.