ರಾಮನಗರ: ಪರವಾನಗಿ ನಿಯಮ ಉಲ್ಲಂಘಿಸಿ ಎರಡು ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು ₹1.18 ಕೋಟಿ ಮೌಲ್ಯದ 29,380 ಲೀಟರ್ ಮದ್ಯವನ್ನು ಅಬಕಾರಿ ಅಧಿಕಾರಿಗಳು ಭಾನುವಾರ ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ.
ನಗರದ ಹೊರವಲಯದಲ್ಲಿ ಎರಡು ಲಾರಿಗಳಲ್ಲಿ ಮದ್ಯದ ಬಾಕ್ಸ್ಗಳನ್ನು ಸಾಗಿಸಲಾಗುತ್ತಿತ್ತು. ಲಾರಿಗಳನ್ನು ತಡೆದು ಪರಿಶೀಲನೆ ನಡೆಸಿದಾಗ ಚನ್ನಪಟ್ಟಣದ ಎಂಎಸ್ಐಎಲ್ ಸರ್ಕಾರಿ ಗೋದಾಮಿಗೆ ಹೊರಟಿರುವುದು ಗೊತ್ತಾಯಿತು.
ದಾಖಲೆ ಪರಿಶೀಲಿಸಿದಾಗ ಪರವಾನಗಿ ಪತ್ರದಲ್ಲಿ ಡಿಸ್ಟಿಲರಿ ಅಧಿಕಾರಿಯ ಸಹಿ ಇರಲಿಲ್ಲ. ಹಾಗಾಗಿ, ಪರವಾನಗಿ ನಿಯಮ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂಬಂಧಪಟ್ಟ ಇಲಾಖೆಯವರು ದಂಡ ಪಾವತಿಸಿ, ಮದ್ಯ ತುಂಬಿದ ಲಾರಿಗಳನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಮತ್ತೊಂದೆಡೆ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ₹2,664 ಮೌಲ್ಯದ 4.068 ಲೀಟರ್ ಮದ್ಯ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.