ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂ. ಗ್ರಾಮಾಂತರ: ಅಂದಾಜು ಶೇ 65.72ರಷ್ಟು ಮತದಾನ

Published 27 ಏಪ್ರಿಲ್ 2024, 6:46 IST
Last Updated 27 ಏಪ್ರಿಲ್ 2024, 6:46 IST
ಅಕ್ಷರ ಗಾತ್ರ

ರಾಮನಗರ: ಪ್ರಜಾಪ್ರತಿನಿಧಿಗಳ ಆಯ್ಕೆಗಾಗಿ ಗುರುವಾರ ನಡೆದ ಮತದಾನದಲ್ಲಿ ಜನ ಬಿರು ಬಿಸಿಲು ಲೆಕ್ಕಿಸದೆ ಮತದಾರರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಜನರು ಉತ್ಸಾಹದಿಂದ ಮತ ಚಲಾಯಿಸಿದ್ದರ ಪರಿಣಾಮವಾಗಿ, ಹೈ ವೋಲ್ಟೇಜ್ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರದಲ್ಲಿ ರಾತ್ರಿ 8ರ ಹೊತ್ತಿಗೆ ಅಂದಾಜು ಶೇ 65.72ರಷ್ಟು ಮತದಾನವಾಯಿತು.

ಬೆಂಗಳೂರು ದಕ್ಷಿಣ ಸೇರಿದಂತೆ ಕೆಲವೆಡೆ ಸಂಜೆ 6ರ ನಂತರ ರಾತ್ರಿವರೆಗೆ ಮತದಾನ ನಡೆದಿದೆ. ರಾತ್ರಿ 8ರವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಅಂದಾಜು ಶೇ 65.72ರಷ್ಟು ಮತದಾನವಾಗಿದೆ. ಪೂರ್ಣ ಮತದಾನದ ಪ್ರಮಾಣ ಲೆಕ್ಕ ಹಾಕುವುದು ತಡರಾತ್ರಿಯಾಗುವ ಸಾಧ್ಯತೆ ಇದ್ದು, ಈ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕಳೆದ ಸಲ ಶೇ 64.09 ಮತದಾನವಾಗಿತ್ತು. ತೀವ್ರ ಪೈಪೋಟಿಯ ಈ ಸಲದ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಉತ್ಸಾಹ ತೋರಿದ್ದರಿಂದ ಅಂದಾಜು ಶೇ 1.63ರಷ್ಟು ಮತದಾನ ಹೆಚ್ಚಳವಾಗಿರುವುದು ಮತದಾರರು ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ನಡೆದ ಮತದಾನ ನಡೆಯಿತು. ಕೆಲವೆಡೆ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೆಲ ಹೊತ್ತು ವಿಳಂಬವಾಗಿ ಮತದಾನ ಶುರುವಾಯಿತು. ಮಂದಗತಿಯೊಂದಿಗೆ ಬೆಳಿಗ್ಗೆ ಶುರುವಾದ ಮತದಾನ ನಂತರ ಚುರುಕುಗೊಂಡಿತು. ಮಧ್ಯಾಹ್ನ ಮತ್ತೆ ಮಂದಗತಿಯಲ್ಲಿ ಸಾಗಿ, ಸಂಜೆ ಹೊತ್ತಿಗೆ ಮತ್ತೆ ತ್ವರಿತವಾಗಿ ನಡೆಯಿತು.

ಬೆಳಿಗ್ಗೆ 8ರ ಹೊತ್ತಿಗೆ ಶೇ 8.39ರಷ್ಟು ನಡೆದಿದ್ದ ಮತದಾನ 11 ಗಂಟೆಗೆ ಶೇ 20.35 ತಲುಪಿತ್ತು. ಮಧ್ಯಾಹ್ನ 1 ಗಂಟೆಗೆ ಶೇ 36.09ರಷ್ಟು, 3ಕ್ಕೆ ಶೇ 49.62ರಷ್ಟು ಹಾಗೂ ಸಂಜೆ 5ಕ್ಕೆ 61.78ರಷ್ಟು ಮತದಾನ ಪ್ರಮಾಣ ದಾಖಲಾಗಿತ್ತು. ಅಂತಿಮವಾಗಿ ಸಂಜೆ 6ಕ್ಕೆ ಮತದಾನದ ಅವಧಿ ಮುಗಿದಾಗ ಕ್ಷೇತ್ರದ ಒಟ್ಟು ಮತದಾನ ಅಂದಾಜು ಶೇ 70ರಷ್ಟು ತಲುಪಿತ್ತು.

ವೆಬ್ ಕ್ಯಾಸ್ಟಿಂಗ್: ಹೈ ವೋಲ್ಟೇಜ್ ಆಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೇಲೆ ಚುನಾವಣಾ ಆಯೋಗವು ಹೆಚ್ಚಿನ ನಿಗಾ ಇಟ್ಟಿದ್ದರಿಂದ, ಮತದಾನ ಪ್ರಕ್ರಿಯೆಯನ್ನು ವೆಬ್ ಕ್ಯಾಸ್ಟಿಂಗ್ ಮಾಡಲಾಯಿತು. ದೇಶದ ಭವಿಷ್ಯ ನಿರ್ಧರಿಸುವ ಮತದಾನದಲ್ಲಿ ವಯಸ್ಕರ ಜೊತೆಗೆ ಮೊದಲ ಸಲ ಮತದಾನದ ಹಕ್ಕು ಪಡೆದ ಯುವಜನರು ಸಹ ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ನಡೆಯಲು ಸಾಧ್ಯವಾಗದವರು, ಅಂಗವಿಕಲರು ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಕುಟುಂಬದವರು ವಾಹನದಲ್ಲಿ ಕರೆತಂದು ಮತ ಹಾಕಿಸಿ ವಾಪಸ್ ಕರೆದುಕೊಂಡು ಹೋಗುತ್ತಿದ್ದ ದೃಶ್ಯ ನಗರದ ಮತ್ತು ಗ್ರಾಮೀಣ ಭಾಗದಲ್ಲಿ ಕಂಡುಬಂತು. ವಯಸ್ಕರು ಮತ್ತು ಅಂಗವಿಕಲರ ಅನುಕೂಲಕ್ಕಾಗಿ ಮತಗಟ್ಟೆಗಳ ಬಳಿ ಗಾಲಿ ಕುರ್ಚಿ ಹಾಗೂ ರ‍್ಯಾಂಪ್ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ಸ್ವಯಂಸೇವಕರು ಅವರಿಗೆ ನೆರವಾದರು.

ಮತಗಟ್ಟೆ ಹೊರಗಡೆ ಠಿಕಾಣಿ: ಮತಗಟ್ಟೆಗಳ ಹೊರಗಡೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಬೆಳಿಗ್ಗೆಯಿಂದ ಸಂಜೆವರೆಗೆ ಠಿಕಾಣಿ ಹೂಡಿದ್ದರು. ಮತ ಚಲಾಯಿಸಲು ಬರುತ್ತಿದ್ದ ತಮ್ಮ ಪಕ್ಷದವರಿಗೆ ಮತದಾರರ ಗುರುತಿನ ಚೀಟಿಯನ್ನು ನೋಡಿ, ಅವರ ಕ್ರಮಸಂಖ್ಯೆಯನ್ನು ಗುರುತಿಸಿ ಕೊಡುತ್ತಿದ್ದರು.

ಎಲ್ಲಾ ಪಕ್ಷಗಳ ಕಾರ್ಯಕರ್ತರು ಮತಗಟ್ಟೆಯ ಹೊರಗಡೆ ಶಾಮಿಯಾನ ಹಾಕಿಕೊಂಡು, ಒಂದಿಷ್ಟು ಕುರ್ಚಿಗಳನ್ನು ಹಾಕಿಕೊಂಡು ಕುಳಿತಿದ್ದರು. ಸ್ಥಳೀಯ ರಾಜಕಾರಣಿಗಳು ಮತಗಟ್ಟೆಗಳಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು. ಕೆಲ ಮತಗಟ್ಟೆಗಳಲ್ಲಿ ಕಾರ್ಯಕರ್ತರು ಮತದಾರರಿಗೆ ಮಜ್ಜಿಗೆ ಹಾಗೂ ನೀರಿನ ವ್ಯವಸ್ಥೆ ಮಾಡಿದರು.

ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಖಿ, ಅರಣ್ಯ, ಯುವಜನ, ಸಾಂಪ್ರದಾಯಿಕ, ಅಂಗವಿಕಲರ ನಿರ್ವಹಣೆಯ ವಿಶೇಷ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದ್ದ ಈ ಮತಗಟ್ಟೆಗಳಿಗೆ ಬಂದು ಹಕ್ಕು ಚಲಾಯಿಸಿದ ಜನ, ಮತಗಟ್ಟೆಯ ಸಿಂಗಾರವನ್ನು ಕಣ್ತುಂಬಿಕೊಂಡರು.

ಮತದಾನದ ಪ್ರಯುಕ್ತ ನಗರ ಮತ್ತು ಗ್ರಾಮಗಳಲ್ಲಿ ತೆರೆದಿದ್ದ ಮತಗಟ್ಟೆಗಳ ಸುಮಾರು 200 ಮೀಟರ್‌ ದೂರದಲ್ಲಿ ಅಂಗಡಿಗಳನ್ನು ಮುಚ್ಚಲಾಗಿತ್ತು. ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡದಂತೆ ನಿಗಾ ಇಡಲಾಗಿತ್ತು.

ಎಲ್ಲೆಡೆ ಬಿಗಿ ಬಂದೋಬಸ್ತ್
ಹೈ ವೋಲ್ಟೇಜ್ ಆಗಿದ್ದ ಕ್ಷೇತ್ರದ ಮೇಲೆ ಈ ಸಲ ಚುನಾವಣಾ ಆಯೋಗ ವಿಶೇಷ ನಿಗಾ ಇಟ್ಟಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಅರೆ ಸೇನಾಪಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿತ್ತು. ಅದರಲ್ಲೂ ಕನಕಪುರ ಕ್ಷೇತ್ರದ ಹಲವು ಮತಗಟ್ಟೆಗಳಲ್ಲಿ ಅರೆ ಸೇನಾಪಡೆಯ ತಲಾ ಇಬ್ಬರು ಸಿಬ್ಬಂದಿ ಜೊತೆಗೆ ಪೊಲೀಸರು ಸಹ ಬಂದೋಬಸ್ತ್‌ನಲ್ಲಿದ್ದರು. ಪೊಲೀಸರು ಗೃಹ ರಕ್ಷಕ ಸಿಬ್ಬಂದಿ ಜೊತೆಗೆ ಅರೆ ಸೇನಾಪಡೆ ತುಕಡಿಯನ್ನು ಸಹ ನಿಯೋಜಿಸಲಾಗಿದೆ. ಪೊಲೀಸ್ ಇಲಾಖೆಯಿಂದ 2300 ಪೊಲೀಸರು ಕೆಎಸ್‌ಆರ್‌ಪಿಯಿಂದ 5 ತುಕಡಿ 94 ಸೆಕ್ಟರ್ ಅಧಿಕಾರಿಗಳು 63 ತುಕಡಿಗಳು 1041 ಸಿವಿಲ್ ಪೊಲೀಸರು ಹಾಗೂ 824 ಗೃಹ ರಕ್ಷಕರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಇನ್‌ಸ್ಪೆಕ್ಟರ್‌ಗಳು ಮತ್ತು ಡಿವೈಎಸ್ಪಿಗಳ ನೇತೃತ್ವದ ಮೊಬೈಲ್ ಸ್ಕ್ವಾಡ್‌ಗಳು ಕ್ಷೇತ್ರದಾದ್ಯಂತ ಸಂಚರಿಸಿ ನಿಗಾ ವಹಿಸಿದವು. ಕ್ಷೇತ್ರವಾರು ಡಿ ಮಸ್ಟರಿಂಗ್ ಮತದಾನ ಅವಧಿ ಮುಗಿಯುತ್ತಿದ್ದಂತೆ ವಿಧಾನಸಭಾ ಕ್ಷೇತ್ರವಾರು ಗುರುತಿಸಲಾಗಿದ್ದ ಶಾಲಾ–ಕಾಲೇಜುಗಳಿಗೆ ಬಂದ ಮತಗಟ್ಟೆ ಸಿಬ್ಬಂದಿ ಮತಯಂತ್ರ ಹಾಗೂ ಚುನಾವಣಾ ಪರಿಕರಗಳನ್ನು ರಾತ್ರಿ ಒಪ್ಪಿಸಿದರು. ರಾಮನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನಪಟ್ಟಣದಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಕನಕಪುರದಲ್ಲಿ ರೂರಲ್ ಪದವಿ ಪೂರ್ವ ಕಾಲೇಜು ಮಾಗಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಣಿಗಲ್‌ನ ಮಹಾತ್ಮ ಗಾಂಧೀಜಿ ಪದವಿ ಪೂರ್ವ ಕಾಲೇಜು ರಾಜರಾಜೇಶ್ವರಿ ನಗರದ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಬೆಂಗಳೂರು ದಕ್ಷಿಣದ ಜಯನಗರ ನ್ಯಾಷನಲ್ ಕಾಲೇಜು ಹಾಗೂ ಆನೇಕಲ್ ಕ್ಷೇತ್ರದಲ್ಲಿ ಚಂದಾಪುರ ಸ್ವಾಮಿ ವಿವೇಕಾನಂದ ಗ್ರಾಮಾಂತರ ಶಾಲೆಯಲ್ಲಿ ಡಿ ಮಸ್ಟರಿಂಗ್ ಕಾರ್ಯ ಜರುಗಲಿದೆ. ಅಂತಿಮವಾಗಿ ರಾಮನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು ಅಂದು ಅಭ್ಯರ್ಥಿಗಳು ಭವಿಷ್ಯ ಗೊತ್ತಾಗಲಿದೆ. ನಾಯಕರು ಗಣ್ಯರ ಮತ ಚಲಾವಣೆ ಕ್ಷೇತ್ರದ ಘಟಾನುಘಟಿ ನಾಯಕರು ಹಾಗೂ ಜನಪ್ರತಿನಿಧಿಗಳು ತಮ್ಮೂರಿನ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಮತ್ತು ಅವರ ಅಣ್ಣ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಹುಟ್ಟೂರಾದ ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿಯಲ್ಲಿ ಕುಟುಂಬದೊಂದಿಗೆ ಬಂದು ಮತ ಚಲಾಯಿಸಿದರು. ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಸಖಿ ಮತಗಟ್ಟೆಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸೊಸೆ ರೇವತಿ ಅವರೊಂದಿಗೆ ಬಂದು ಮತ ಚಲಾಯಿಸಿದರು. ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರು ಕುಟುಂಬದೊಂದಿಗೆ ತಾಲ್ಲೂಕಿನ ಹುಲಿಕಲ್‌ನಲ್ಲಿ ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಕನಕಪುರ ತಾಲ್ಲೂಕಿನ ಹೂಕುಂದದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸ್ವಗ್ರಾಮ ಚಕ್ಕೆರೆಯಲ್ಲಿ ಮಾಜಿ ಶಾಸಕ ಎ. ಮಂಜುನಾಥ್ ಬೈರಮಂಗಲದಲ್ಲಿ ಸಿ.ಎಂ. ಲಿಂಗಪ್ಪ ಅವರು ಇಟ್ಟಮಡುವಿನಲ್ಲಿ ತಮ್ಮ ಹಕ್ಕು ಚಲಾಯಿಸಿದರು. ತಾಂತ್ರಿಕ ಸಮಸ್ಯೆ; ಮತದಾನ ವಿಳಂಬ ಜಿಲ್ಲೆಯ ಕೆಲವೆಡೆ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕೆಲ ಹೊತ್ತು ಮತದಾನ ವಿಳಬವಾಯಿತು. ರಾಮನಗರದ ಶಾಂತಿನಿಕೇತನ ಮತಗಟ್ಟೆಯಲ್ಲಿ ಬೆಳಿಗ್ಗೆ ತಾಂತ್ರಿಕ ದೋಷದಿಂದಾಗಿ ಅರ್ಧ ತಾಸು ವಿಳಂಬವಾಗಿ ಮತದಾನ ನಡೆಯಿತು. ಬಿಡದಿಯ ಕಲ್ಲುಗೋಪಹಳ್ಳಿಯಲ್ಲಿ30 ನಿಮಿಷ ಮತದಾನ ಸ್ಥಗಿತಗೊಂಡಿತ್ತು. ಚನ್ನಪಟ್ಟಣ ನಗರದ ಮತಗಟ್ಟೆ ಸಂಖ್ಯೆ 84ರಲ್ಲಿ ಜಯಮ್ಮ ಎಂಬವರ ಹೆಸರು ಬದಲಾಗಿ ಸೈಯದ್ ಜಾವಿದ್‌ ಎಂಬ ಹೆಸರು ಮುದ್ರಣ ಮಾಡಿದ್ದರಿಂದ ಮತಗಟ್ಟೆ ಅಧಿಕಾರಿಗಳು ಜಯಮ್ಮ ಅವರಿಗೆ ಹಕ್ಕು ಚಲಾಯಿಸಲು ಅವಕಾಶ ನೀಡಲಿಲ್ಲ. ಉಳಿದಂತೆ ಬಹುತೇಕ ಕಡೆ ಯಾವುದೇ ತೊಂದರೆ ಇಲ್ಲದೆ ಮತದಾನ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT