ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಮರೆತ ಅಸ್ತ್ರ ಎತ್ತಿಕೊಂಡ ‘ಕೈ’

Published 16 ಜನವರಿ 2024, 5:56 IST
Last Updated 16 ಜನವರಿ 2024, 5:56 IST
ಅಕ್ಷರ ಗಾತ್ರ

ರಾಮನಗರ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಇಲ್ಲಿಯ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮತ್ತು ರಾಮೋತ್ಸವ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಈ ಬಾರಿ ಜಿಲ್ಲೆಯಲ್ಲಿ ರಾಮಮಂದಿರ ಜಪ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷ.

ವಿಧಾನಸಭೆ ಚುನಾವಣೆ ಸಮಯದಲ್ಲಿ ಮಂದಿರ ನಿರ್ಮಾಣವನ್ನು ಬಿಜೆಪಿ ಸ್ಥಳೀಯವಾಗಿ ರಾಜಕೀಯ ಅಸ್ತ್ರವಾಗಿಸಿಕೊಂಡಿತ್ತು. ರಾಮದೇವರ ಬೆಟ್ಟವನ್ನು ದಕ್ಷಿಣದ ಅಯೋಧ್ಯೆಯನ್ನಾಗಿ ಅಭಿವೃದ್ಧಿ ಮಾಡುವುದಾಗಿ ಘೋಷಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಬಜೆಟ್‌ನಲ್ಲಿ ರಾಮದೇವರ ಬೆಟ್ಟದಲ್ಲಿ ಮಂದಿರ ನಿರ್ಮಾಣ ವಿಷಯ ಘೋಷಿಸಿದ್ದರು. 

ಮಂದಿರಕ್ಕಾಗಿ ₹40 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಅಂದಿನ ಡಿಸಿಎಂ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿದ್ದ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದರು. ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿಯವರು ಆ ವಿಷಯವನ್ನೇ ಮರೆತರು. ಇದೀಗ ಬಿಜೆಪಿ ಬಳಸಿ ಬಿಟ್ಟ ಅಸ್ತ್ರವನ್ನು ಕಾಂಗ್ರೆಸ್‌ ಕೈಗೆತ್ತಿಕೊಂಡಿದೆ. 

ಮಂದಿರ ವಿಷಯ ಮುನ್ನೆಲೆಗೆ ಬರಲು ನಾಂದಿ ಹಾಡಿದ್ದು ರಾಮನಗರ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್. ಕಳೆದ ಅಕ್ಟೋಬರ್‌ನಲ್ಲಿ ನಡೆದ ಯುವ ಉತ್ಸವದಲ್ಲಿ ‘ರಾಮನ ಭೂಮಿಯಾದ ರಾಮನಗರದಲ್ಲಿ ಜನವರಿಯಲ್ಲಿ ಮೂರು ದಿನಗಳ ರಾಮೋತ್ಸವ ಆಚರಿಸುವ ಚಿಂತನೆ ಇದೆ’ ಎಂದು ಹೇಳಿದ್ದರು. ಆರಂಭದಲ್ಲಿ ಅಂತರ ಕಾಯ್ದುಕೊಂಡಿದ್ದ ಸಂಸದ ಸುರೇಶ್ ನಂತರ ಇದಕ್ಕೆ ಧ್ವನಿಗೂಡಿಸಿದ್ದರು.

‘ಬೆಟ್ಟದಲ್ಲಿ ಭವ್ಯ ರಾಮಮಂದಿರ ನಿರ್ಮಿಸಲಾಗುವುದು. ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚಿಸಲಾಗಿದ್ದು, ಮುಂದಿನ ಸಭೆಯಲ್ಲಿ ಅನುದಾನ ನಿಗದಿಯಾಗಲಿದೆ’ ಎಂದು ಹೇಳಿದ್ದಾರೆ. ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಸಹ, ‘ಮಂದಿರ ನಿರ್ಮಾಣಕ್ಕೆ ಬೆಟ್ಟದಲ್ಲಿ ಜಾಗ ಹುಡುಕಾಟ ನಡೆದಿದೆ’ ಎಂದು ಹೇಳಿದ್ದಾರೆ.

ಮೃದು ಹಿಂದುತ್ವ ಪ್ರಯೋಗ
ಬಿಜೆಪಿಯ ಹಿಂದುತ್ವದ ಪ್ರಯೋಗ ನಡೆಯದ ಜಿಲ್ಲೆಯಲ್ಲಿ ಮೃದು ಹಿಂದುತ್ವ ಪ್ರಯೋಗಿಸಿ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯುವ ಲೆಕ್ಕಾಚಾರ ಕಾಂಗ್ರೆಸ್‌ನದ್ದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಚುನಾವಣಾ ವಿಷಯವಾಗಿರುವ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಅಲೆಯ ಪರಿಣಾಮ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಗೆಲುವಿನ ಓಟಕ್ಕೆ ಅಡ್ಡಿಯಾಗದಂತೆ ತಡೆಯಬೇಕಿದೆ. ಅದಕ್ಕಾಗಿ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಹಾಗೂ ರಾಮನಗರದಲ್ಲಿ ರಾಮೋತ್ಸವ ವಿಷಯವನ್ನು ಸ್ಥಳೀಯವಾಗಿ ಮುನ್ನೆಲೆಗೆ ತರಲಾಗಿದೆ. ಇದರಿಂದ ಮತದಾರರರನ್ನು ತಮ್ಮತ್ತ ಸೆಳೆದು ಬಿಜೆಪಿ–ಜೆಡಿಎಸ್ ಮೈತ್ರಿಗೆ ತಿರುಗೇಟು ಕೊಡಲು ಕಾಂಗ್ರೆಸ್ ತಂತ್ರ ಹೆಣೆದಿದೆ ಎಂದು ಹೇಳಲಾಗುತ್ತಿದೆ. 
ರಣಹದ್ದುಗಳ ಸಂರಕ್ಷಿತ ವಲಯ
‘ಪರಿಸರ ಸೂಕ್ಷ್ಮವಲಯ ಹಾಗೂ ಉದ್ದ ಕೊಕ್ಕಿನ ರಣಹದ್ದುಗಳ ಆವಾಸಸ್ಥಾನವಾಗಿರುವ ಬೆಟ್ಟದಲ್ಲಿ ಮಂದಿರ ನಿರ್ಮಾಣಕ್ಕೆ ಜಾಗ ಲಭ್ಯತೆ ಕುರಿತು ಸರ್ವೇ ನಡೆಸಲು ಅರಣ್ಯ ಇಲಾಖೆ ಮತ್ತು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ’ ಎಂದು ಸಂಸದ ಡಿ.ಕೆ. ಸುರೇಶ್‌ ಎರಡು ದಿನದ ಹಿಂದೆ ಹೇಳಿದ್ದಾರೆ. ರಾಮದೇವರ ಬೆಟ್ಟವನ್ನು 2012ರಲ್ಲಿ ಸಂರಕ್ಷಿತ ಹಾಗೂ ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲಾಗಿದೆ. ಅಳಿವಿನ ಅಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳ ವಾಸಸ್ಥಾನವಾಗಿದೆ. ಹಾಗಾಗಿ ಬೆಟ್ಟದ ಅಭಿವೃದ್ಧಿ ಅಥವಾ ರಾಮಮಂದಿರ ನಿರ್ಮಾಣ ಕುರಿತು ಯಾವುದೇ ಬೆಳವಣಿಗೆ ನಡೆದಿಲ್ಲ ಎನ್ನುತ್ತವೆ ಜಿಲ್ಲಾಡಳಿತದ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT