ಬಿಡದಿ: ಗ್ರಾಮ ಪಂಚಾಯಿತಿಗಳು ಮಿನಿ ಸರ್ಕಾರವಿದ್ದಂತೆ. ಪಂಚಾಯಿತಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿದರೆ ಸರ್ಕಾರ ಮಾಡಬಹುದಾದ ಅನೇಕ ಕಾಮಗಾರಿಗಳನ್ನು ಪಂಚಾಯಿತಿ ಮೂಲಕವೂಮಾಡಬಹುದು ಎಂದು ಶಾಸಕ ಎ. ಮಂಜುನಾಥ್ ಅಭಿಪ್ರಾಯಪಟ್ಟರು.
ಹೋಬಳಿಯ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದು. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಸಂದರ್ಭದಲ್ಲಿನ ರಾಜಕೀಯ ಮರೆತು ಪಂಚಾಯಿತಿ ವ್ಯಾಪ್ತಿಯ ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಮತ್ತು ಪಂಚಾಯಿತಿಯ ಸೌಲಭ್ಯ ತಲುಪಿಸುವ ಕೆಲಸ ಆಗಬೇಕು ಎಂದರು.
ಅಧ್ಯಕ್ಷೆ ಸುಮತಿ ನಾಗರಾಜು ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಶಾಸಕರು ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮತ್ತು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯಿತಿಯನ್ನು ಮಾದರಿಯಾಗಿ ರೂಪಿಸಲು ಕ್ರಮವಹಿಸುತ್ತೇನೆ ಎಂದು ಹೇಳಿದರು.
ಉಪಾಧ್ಯಕ್ಷ ಗಾಣಕಲ್ ರೇವಣಸಿದ್ದಯ್ಯ, ಸದಸ್ಯರಾದ ಡಿ. ಲಕ್ಷ್ಮಣ್, ವೆಂಕಟೇಶಯ್ಯ, ಗೌರಮ್ಮ, ಪವಿತ್ರಾ, ಸುಕನ್ಯಾ, ಮಮತಾ, ಕೆ.ಎಂ. ದೇವರಾಜು, ಪಿಡಿಒ ಮಹೇಶ್, ಕಾರ್ಯದರ್ಶಿ ಸೀನಪ್ಪ, ನರಸಿಂಹಯ್ಯ, ಪುರಸಭೆ ಮಾಜಿ ಅಧ್ಯಕ್ಷೆ ನೇತ್ರಾವತಿ, ಜೆಡಿಎಸ್ ಮುಖಂಡರಾದ ಸೋಮೇಗೌಡ, ಶೇಷಪ್ಪ ಇದ್ದರು.