ಬಿಡದಿ/ರಾಮನಗರ: ‘ರಾಜ್ಯ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಉಚಿತವಾಗಿ ಕೆಲ ಯೋಜನೆಗಳನ್ನು ಜಾರಿ ಮಾಡಿ ಅದರ ಹೊರೆಯನ್ನು ಸಾರಿಗೆ ಇಲಾಖೆ ಮೇಲೆ ಹೊರಿಸಿದೆ. ಹೀಗಿರುವಾಗ ಇಲಾಖೆಗೆ ನಷ್ಟವಾಗದೇ ಏನು ಲಾಭವಾಗುತ್ತಾ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬಿಡದಿಯ ತಮ್ಮ ತೋಟದ ಮನೆಯಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ನಾನು 2006-07 ರಲ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ಸಾರಿಗೆ ಇಲಾಖೆಯಲ್ಲಿ ಹಣವನ್ನು ಠೇವಣಿ ಇಟ್ಟಿದ್ದೆ. ಆದರೆ ಈ ಸರ್ಕಾರದಲ್ಲಿ ಹಣ ಇಲ್ಲ ಅಂದರೆ ಹೇಗೆ?’ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಸರ್ಕಾರದ ತಪ್ಪು ಇಟ್ಟುಕೊಂಡು ಚಾಲಕ, ನಿರ್ವಾಹಕರ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಈ ಸರ್ಕಾರದ ಯೋಗ್ಯತೆಗೆ ಸಾರಿಗೆ ಇಲಾಖೆ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗಿಲ್ಲ. ಇವರು ಎಲ್ಲಿ ಹಣವನ್ನ ಪೋಲು ಮಾಡುತ್ತಿದ್ದಾರೆ ಅಂತಾ ರಾಜ್ಯದ ಜನತೆಗೆ ಗೊತ್ತಿಲ್ವಾ’ ಎಂದು ವ್ಯಂಗ್ಯವಾಗಿ ಹೇಳಿದರು.