ರಾಮನಗರ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು, ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಸಚಿವ ಶಿವರಾಜ ತಂಗಡಗಿ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಐಜೂರು ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ತಂಗಡಗಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
ಸಚಿವ ತಂಗಡಗಿ ಹೇಳಿಕೆಯು ನಾಚಿಕೆಗೇಡಿತನದಿಂದ ಕೂಡಿದ್ದು, ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ದೇಶದ ಪ್ರಧಾನಿ ಕುರಿತು ಅಗೌರವದಿಂದ ಮಾತನಾಡಿರುವ ಇಂತಹವರು ಸಚಿವ ಸ್ಥಾನದಲ್ಲಿರಲು ಅನರ್ಹರು. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಒತ್ತಾಯಿಸಿದರು.
ಬಿಜೆಪಿ ಪಕ್ಷದ ನಗರ ಘಟಕದ ಅಧ್ಯಕ್ಷ ದರ್ಶನ್ ರೆಡ್ಡಿ ಮಾತನಾಡಿ, ಚುನಾವಣೆಗೂ ಮುಂಚೆಯೇ ಕಾಂಗ್ರೆಸ್ನವರಿಗೆ ಸೋಲಿನ ಆತಂಕ ಶುರುವಾಗಿದೆ. ದೇಶದಾದ್ಯಂತ ಎದ್ದಿರುವ ಮೋದಿ ಅವರ ಅಲೆ ಸಹಿಸಲಾಗದೆ ಆ ಪಕ್ಷದವರು ಹತಾಶೆಗೊಂಡಿದ್ದಾರೆ. ಅದಕ್ಕಾಗಿ ಈ ರೀತಿ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಮುಖಂಡರಾದ ರುದ್ರದೇವರು, ಜಗದೀಶ್, ಕಿಶನ್ಗೌಡ, ಮಹದೇವ್, ಜಗನ್ನಾಥ್, ಪ್ರಶಾಂತ್, ಕಾಳಯ್ಯ, ಸಂಜಯ್, ಪದ್ಮನಾಭ್, ಮಂಜು, ರಮೇಶ್, ಚನ್ನಪ್ಪ, ನಾಗೇಶ್, ಹೇಮಾವತಿ, ಜಯಕುಮಾರ್, ಕೆಂಪರಾಜು, ಸುರೇಶ್, ರವಿ, ಜಯರಾಮ್ ಹಾಗೂ ಇತರರು ಇದ್ದರು.