ರಾಮನಗರ: ಜಿಲ್ಲಾ ಕ್ರೀಡಾಂಗಣದಲ್ಲಿ ವಾಯು ವಿಹಾರಕ್ಕೆ ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕ್ರೀಡಾಂಗಣದ ಬಳಿ ಶನಿವಾರ ಬೆಳಗ್ಗೆ ಜಮಾಯಿಸಿದ ವಾಯುವಿಹಾರಿಗಳು "ಲಾಕ್ ಡೌನ್ ತೆರವುಗೊಂಡು ಹಲವು ತಿಂಗಳು ಕಳೆದರೂ ಇಲ್ಲಿನ ಕ್ರೀಡಾಧಿಕಾರಿ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ’ ಎಂದು ಆರೋಪಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ವಾಯುವಿಹಾರಿಗಳ ಒಕ್ಕೂಟದ ಮುಖಂಡ ವೆಂಕಟೇಶ್ ಎಂಬುವರು ಮಾತನಾಡಿ "ಈ ತಿಂಗಳ 7ರಿಂದ ಜಿಲ್ಲಾ ಕ್ರೀಡಾಂಗಣ ತೆರೆಯಲು ಜಿಲ್ಲಾಧಿಕಾರಿ ಕ್ರೀಡಾ ಇಲಾಖೆಗೆ ಸೂಚನೆ ನೀಡಿದ್ದಾರೆ. ಆದರೆ ಕ್ರೀಡಾ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಸೂಚನೆಗೆ ಮಾನ್ಯತೆ ನೀಡುತ್ತಿಲ್ಲ’ ಎಂದು ದೂರಿದರು.
ವಾಯುವಿಹಾರಿ ಕುಮಾರ್ ಮಾತನಾಡಿ "ಅಂತರ ಕಾಯ್ದುಕೊಂಡು ಲಘು ವ್ಯಾಯಾಮ ಮಾಡಿಕೊಳ್ಳುತ್ತೇವೆ ಎಂದು ಮನವಿ ಮಾಡಿದರೂ ಅಧಿಕಾರಿಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಇಲ್ಲಿನ ಅಧಿಕಾರಿಗಳಿಗೆ ಆದೇಶ ನೀಡಿ, ಬೆಳಗ್ಗೆ ಮತ್ತು ಸಂಜೆ ವೇಳೆ ವಾಯುವಿಹಾರಿಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಶಾಂತಿಯುತ ಹೋರಾಟದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಲಾಗುವುದು ಎಂದರು.
ವಾಯುವಿಹಾರಿಗಳಾದ ತನ್ವೀರ್, ರಾಮದಾಸ್, ಮಲವಯ್ಯ, ಕುಮಾರ್, ಡಿಪೊ ಚಿಕ್ಕಣ್ಣ, ದೊಡ್ಡಿ ಸುರೇಶ್, ಯಕ್ಷ ರಾಜ್, ಶಂಕರ್ ರಾವ್ ಮುಂತಾದವರು ಇದ್ದರು.