ಮಾಗಡಿ: ಅನ್ವೇಷಣೆ ಬಹಿರ್ಮುಖವಾಗಿ ಸೃಷ್ಟಿ ರಹಸ್ಯದ ಕಡೆಗೆ ತಿರುಗಿದಾಗ ವಿಜ್ಞಾನ ಎನಿಸಿಕೊಳ್ಳುತ್ತದೆ. ಅಂತರ್ಮುಖವಾಗಿ ತಿರುಗಿದಾಗ ಧರ್ಮ ಎನಿಸಿಕೊಳ್ಳುತ್ತದೆ ಎಂದು ಸಂಸ್ಕೃತಿ ಚಿಂತಕ ಕೆ.ಎನ್.ಗಂಗರಾಜು ಅಭಿಪ್ರಾಯಪಟ್ಟರು.
ಪಟ್ಟಣದ ಗಂಗಾಧರೇಶ್ವರ ಪ್ರೌಢಶಾಲೆ ಮಕ್ಕಳಿಗೆ ಜನ್ಮದಿನದ ಅಂಗವಾಗಿ ಲೇಖನ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.
ವಿಜ್ಞಾನಿ ಐನ್ಸ್ಟೈನ್ ಹೇಳಿರುವಂತೆ; ಧರ್ಮವಿಲ್ಲದ ವಿಜ್ಞಾನ ಕುರುಡು. ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುಂಟು. ಮಾನವಧರ್ಮದ ಮೂಲ ಸ್ವರೂಪ ಸಾರ್ವತ್ರಿಕವಾದ ಸತ್ಯದಿಂದ ಕೂಡಿದೆ. ಸರ್ವರಿಗೂ ಒಳಿತನ್ನೇ ಬಯಸುವ ಮೂಲತತ್ವ ಒಳಗೊಂಡಂತೆ ಮಕ್ಕಳಿಗೆ ಮೌಲ್ಯ ಕಲಿಸಬೇಕೆಂದು ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕ ಚನ್ನೇಗೌಡ ಮಾತನಾಡಿ, ಮನುಕುಲದ ಏಳಿಗೆಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಶಾಂತಿಪ್ರಿಯರ ಜಗತ್ತು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕೆ.ಬಿ.ಬಸವರಾಜು, ಕೋಂಡಹಳ್ಳಿ ಶಿವಲಿಂಗಯ್ಯ, ನರಸಮ್ಮ ನರಸಯ್ಯ, ಲಕ್ಷ್ಮಮ್ಮ ಇದ್ದರು. ವಿದ್ಯಾರ್ಥಿಗಳಿಗೆ ನೆರವು ನೀಡಿದ ಕೆ.ಎನ್.ಗಂಗರಾಜು ದಂಪತಿಯನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಶಾಲೆ ಶಿಕ್ಷಕರಾದ ರಜನಿ, ಕುಮಾರ್, ಕಿರಣ್ ಹಾಗೂ ವಿದ್ಯಾರ್ಥಿಗಳು ಇದ್ದರು.