ಕನಕಪುರ: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಉಡ ಬೇಟೆ ನಡೆಸಿದ್ದ ಇಬ್ಬರು ಕಳ್ಳಬೇಟೆಗಾರರನ್ನು ಅರಣ್ಯ ಇಲಾಖೆ ಬಂಧಿಸಿದೆ.
ಉಯ್ಯಂಬಳ್ಳಿ ಹೋಬಳಿ ಮಡಿವಾಳ ಗ್ರಾಮದ ಮಹಾಲಿಂಗ (30), ಕೋಡಿಹಳ್ಳಿ ಹೋಬಳಿ ಹೊನ್ನಿಗನಹಳ್ಳಿ ಗ್ರಾಮದ ನಾಗರಾಜು (22) ಬಂಧಿತರು. ಮಡಿವಾಳ ಗ್ರಾಮದ ಶಿವಮಾದ (24) ಎಂಬುವವ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.ಆರೋಪಿಗಳು ನಾಯಿಗಳನ್ನು ಬಳಸಿವನ್ಯಜೀವಿಧಾಮದ ಮುಗ್ಗೂರು ವಲಯಾರಣ್ಯದಲ್ಲಿ ಬೇಟೆಯಾಡಿದ್ದರು.
ಕೋಡಿಹಳ್ಳಿ ಹೋಬಳಿ ವ್ಯಾಪ್ತಿಯ ಹುಣಸನಹಳ್ಳಿ– ಮುಗ್ಗೂರು ವಲಯದ ಬಸವನವಾಡೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಈ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.ಚಿಲುಮೆ ಒಡು ಅರಣ್ಯ ಪ್ರದೇಶದಲ್ಲಿ ಉಡಗಳನ್ನು ಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಮೂರು ಜೀವಂತ ಉಡಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇವರ ವಿರುದ್ಧ ವನ್ಯಜೀವಿ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ಬಂಧಿತರಿಗೆ ಆರೋಗ್ಯ ತಪಾಸಣೆ ಜತೆಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಅವರಲ್ಲಿ ಸೋಂಕಿಲ್ಲವೆಂದು ದೃಢಪಟ್ಟ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಹೇಳಿದ್ದಾರೆ.