ಮಾಗಡಿ: ಪಟ್ಟಣದ ವಾಸವಿ ವಿದ್ಯಾನಿಕೇತನ್ ಶಾಲೆಯಲ್ಲಿ ಶುಕ್ರವಾರ ಅದ್ದೂರಿಯಾಗಿ ಕೃಷ್ಣ ಜಯಂತಿ ಆಚರಿಸಲಾಯಿತು.
ಶಾಲಾ ಸಂಸ್ಥಾಪಕ ಎಸ್.ಜಿ. ರಮೇಶ್ ಗುಪ್ತ ಮಾತನಾಡಿ, ಕೃಷ್ಣ ಭಾರತೀಯ ಪರಂಪರೆಯಲ್ಲಿ ಅಚ್ಚಳಿಯದ ದಿವ್ಯಮೂರ್ತಿ. ಭಾವುಕ ಭಕ್ತರ ಪ್ರೀತಿಯ ಭಿತ್ತಿಯಲ್ಲಿ ಮತ್ತೆ ಮತ್ತೆ ಮೈದಳೆವ ಪುರುಷೋತ್ತಮ ಎಂದು ಬಣ್ಣಿಸಿದರು.
ಕೃಷ್ಣನ ವೈಯಕ್ತಿಕ ಬದುಕು ಬತ್ತದ ದುಃಖದ ಕುಲುಮೆಯಂತಿದೆ. ದುಷ್ಟರ ವಿರುದ್ಧ ಹೋರಾಡಿದ ಕೃಷ್ಣನ ಆದರ್ಶ ನಮಗೆಲ್ಲರಿಗೂ ಮಾದರಿ. ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ಕೃಷ್ಣನ ಕಥೆಗಳನ್ನು ಕಲಿಸಿಕೊಡಬೇಕು ಎಂದರು.
ಮುಖ್ಯಶಿಕ್ಷಕ ವಸಂತಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಟಿ. ಪಂಚಾಕ್ಷರಿ ಮಾತನಾಡಿದರು. ವಾಸವಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಬಿ.ಕೆ. ರಂಗನಾಥ್, ನಿರ್ದೇಶಕರು, ಪೋಷಕರು, ಶಿಕ್ಷಕರು, ಮಕ್ಕಳು ಇದ್ದರು. 192 ಮಕ್ಕಳು ರಾಧೆ-ಕೃಷ್ಣನ ವೇಷ ಧರಿಸಿ ಪಾಲ್ಗೊಂಡಿದ್ದರು.