ರಾಮನಗರ: ‘ಯುದ್ಧದ ಕಾರಣಕ್ಕೆ ಉಕ್ರೇನ್ ತೊರೆದು ಭಾರತಕ್ಕೆ ವಾಪಸ್ ಆಗಿರುವ ವೈದ್ಯಕೀಯ ವಿದ್ಯಾರ್ಥಿಗಳ ವಿಚಾರದಲ್ಲಿ ಭಾರತವು ಅಲ್ಲಿನ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದರು.
‘ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ವಾಪಸ್ ಕರೆತರುವುದು ನಮ್ಮ ಮೊದಲ ಆದ್ಯತೆ ಆಗಿತ್ತು. ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರನ್ನೂ ಭಾರತಕ್ಕೆ ವಾಪಸ್ ಕರೆತಂದಿದ್ದೇವೆ. ಸದ್ಯ ಈ ವಿದ್ಯಾರ್ಥಿಯನ್ನು ವಾಪಸ್ ಕರೆಯಿಸಿಕೊಳ್ಳಲು ಸಾಧ್ಯವಿಲ್ಲ. ಆನ್ಲೈನ್ ತರಗತಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆಯೆಂದು ಉಕ್ರೇನ್ ಸರ್ಕಾರ ಹೇಳುತ್ತಿದೆ’ ಎಂದು ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಕ್ರೇನ್ನಿಂದ ವಾಪಸ್ ಆದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಓದು ಮುಂದುವರಿಸಲು ಅವಕಾಶ ನೀಡುವ ವಿಚಾರವನ್ನು ಮೆಡಿಕಲ್ ಕೌನ್ಸಿಲ್ ಹಾಗೂ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಈ ವಿಚಾರದಲ್ಲಿ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿರುವುದು ನಮ್ಮ ಗಮನಕ್ಕೂ ಇದೆ ಎಂದರು.
ಅಮೆರಿಕದಲ್ಲಿ ಭಾರತ ಮೂಲದ ಲೇಖಕ ಸಲ್ಮಾನ್ ರಶ್ದಿ ಮೇಲೆ ನಡೆದ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದು ಆತಂಕಕಾರಿ ವಿಚಾರ. ಸದ್ಯ ಪ್ರವಾಸದಲ್ಲಿರುವ ಕಾರಣ ಈ ಬಗ್ಗೆ ವಿವರ ಪಡೆದಿಲ್ಲ’ ಎಂದು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲು ಈ ಪ್ರಚಾರವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಮುಂದಿನ ಚುನಾವಣೆಯಲ್ಲಿ ಕೇವಲ ಬೆಂಗಳೂರು ಮಾತ್ರವಲ್ಲ. ದೇಶದಲ್ಲಿನ ಎಲ್ಲಾ ಕ್ಷೇತ್ರಗಳನ್ನೂ ಬಿಜೆಪಿ ಗೆಲ್ಲಲಿದೆ’ ಎಂದರು.