ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತ ಸಂಘ ಒಗ್ಗೂಡಿಸಲು ಕರೆ

Published 22 ನವೆಂಬರ್ 2023, 5:44 IST
Last Updated 22 ನವೆಂಬರ್ 2023, 5:44 IST
ಅಕ್ಷರ ಗಾತ್ರ

ಕನಕಪುರ:  ಒಡೆದು ಹೋಳಾಗಿರುವ ರೈತ ಸಂಘವನ್ನು ಮತ್ತೆ ಒಗ್ಗೂಡಿಸಿ ಬಲಗೊಳಿಸಲು ಗಟ್ಟಿ ನಿರ್ಧಾರ ಮಾಡಬೇಕು. ಎಲ್ಲರನ್ನು ಒಟ್ಟುಗೂಡಿಸಬೇಕು ಎಂದು ರಾಜ್ಯ ರೈತ ಸಂಘದ ವಿಭಾಗೀಯ ಅಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಕರೆ ನೀಡಿದರು.

ಇಲ್ಲಿನ ರೋಟರಿ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಒಗ್ಗಟ್ಟಿನಿಂದ ಸಂಘಟಿತ ಹೋರಾಟ ನಡೆಸುತ್ತಿದ್ದ ರಾಜ್ಯ ರೈತ ಸಂಘ ಹಲವು ಕಾರಣಗಳಿಂದ ಬಣಗಳಾಯಿತು. ಎಲ್ಲಾ ಬಣಗಳನ್ನು ಒಟ್ಟಾಗಿ ಮಾಡಬೇಕಾದ ಅನಿವಾರ್ಯತೆ ಸಮಾಜದಲ್ಲಿ ಈಗ ಎದುರಾಗಿದೆ ಎಂದು ಹೇಳಿದರು.

ಗ್ರಾಮೀಣ ಭಾಗದ ಜನರು ಹಾಗೂ ರೈತ ಬಾಂಧವರನ್ನು ರಾಜಕೀಯ ಪಕ್ಷಗಳು ಮತಬ್ಯಾಂಕ್‌ ಮಾಡಿಕೊಂಡಿವೆ. ಯಾವ ಸಂಘಟನೆಗಳು, ಹೋರಾಟಗಾರರನ್ನು ಒಗ್ಗಟ್ಟಿನಿಂದ ಇರಲು ಬಿಡದೆ ಒಗ್ಗಟ್ಟನ್ನು ಛಿದ್ರಗೊಳಿಸಿ ಅಸಂಘಟಿತರನ್ನಾಗಿ ಮಾಡಿ ತಮ್ಮ ರಾಜಕೀಯ ಲಾಭ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.

ರಾಜಕೀಯ ನಾಯಕರು ಎಷ್ಟೇ ತಂತ್ರಗಾರಿಕೆ ಮಾಡಿದರು ನಾವು ನೀವು ಮನಸ್ಸು ಮಾಡಿದರೆ ಮತ್ತೆ ಸಂಘಟನೆ ಮಾಡಿ ರೈತ ಸಂಘವನ್ನು ಗಟ್ಟಿಗೊಳಿಸಬಹುದು. ಅದಕ್ಕಾಗಿ ನಾವು ರಾಜ್ಯಾದ್ಯಂತ ಸಾಮೂಹಿಕ ನಾಯಕತ್ವದಲ್ಲಿ ಮತ್ತೆ ಸಂಘಟನೆ ಬಲಪಡಿಸಲು ಹೊರಟಿದ್ದೇವೆ. ಅದಕ್ಕೆ ನೀವೆಲ್ಲರೂ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ರಾಜಕಾರಣಿಗಳು ಪ್ರಚಾರಕ್ಕಾಗಿ ಹಸಿರು ಶಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸುತ್ತಾರೆ. ನಿಜವಾಗಿಯು ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ, ಕೃಷಿ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡರೆ ಮಾತ್ರ ಸರ್ಕಾರ ರೈತರೆಂದು ಪರಿಗಣಿಸುತ್ತಿದೆ ಎಂದು ದೂರಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಮಾತನಾಡಿ, ಸರ್ಕಾರ ಮತ್ತು ಅಧಿಕಾರಿಗಳು ಜನರ ಕೆಲಸ ಮಾಡಲು ಇದ್ದಾರೆ. ಆದರೆ ಈ ತಾಲ್ಲೂಕಿನಲ್ಲಿ ದುಡ್ಡು ಕೊಡದೆ, ಯಾವ ಕೆಲಸವು ಆಗುವುದಿಲ್ಲ ಎನ್ನುವ ಮಾತನ್ನು ಕೇಳಿದ್ದೇನೆ. ದಲ್ಲಾಳಿಗಳಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ ಎಂದ ಮೇಲೆ ಶಾಸಕರು, ಸಚಿವರು ಯಾಕೆ ಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಜನರಿಗೆ ಸಂವಿಧಾನ ಬದ್ಧವಾದ ಆಡಳಿತ ಕೊಡಲು ಸಾಧ್ಯವಾದಿದ್ದರೆ ಸರ್ಕಾರಕ್ಕೆ ನೈತಿಕವಾಗಿ ಮುಂದುವರಿಯಲು ಅವಕಾಶವಿಲ್ಲ. ಮುಖ್ಯ ಮಂತ್ರಿಗಳು, ಉಪ ಮುಖ್ಯಮಂತ್ರಿ ಸಚಿವರ ತಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳದಿದ್ದರೆ ಸರ್ಕರಕ್ಕೆ ಹೆಚ್ಚಿನ ಕಾಲ ಉಳಿಗಾಲ ಇಲ್ಲ ಎಂದು ಎಚ್ಚರಿಸಿದರು.

ರೈತ ಸಂಘವನ್ನು ಹುಟ್ಟಿಹಾಕಿದ ಪ್ರೊ.ನಂಜುಂಡ ಸ್ವಾಮಿ ಅವರು ತಮ್ಮ ಜೀವನವನ್ನು ರೈತರಿಗಾಗಿಯೇ ಮುಡಿಪಾಗಿಟ್ಟಿ ದ್ದರು. ನಿಮ್ಮ ಮಕ್ಕಳಿಗೆ ರೈತ ಚಳವಳಿ ಬಗ್ಗೆ ತಿಳಿಸಿಕೊಡದಿದ್ದರೆ ಮುಂದಿನ ರೈತಾಪಿ ವರ್ಗಕ್ಕೆ ಬಹುದೊಡ್ಡ ಗಂಡಾಂತರ ಎದುರಾಗಲಿದೆ. ಈಗಲೇ ಎಚ್ಚತ್ತುಕೊಳ್ಳಿ ಎಂದು ಎಚ್ಚರಿಸಿದರು.

ರೈತ ಸಮಾವೇಶದಲ್ಲಿ ಹಿರಿಯ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ವಿಭಾಗೀಯ ಅಧ್ಯಕ್ಷೆ ಅನಸೂಯಮ್ಮ, ಜಿಲ್ಲಾ ಅಧ್ಯಕ್ಷ ದೇವರಾಜು, ತಾಲ್ಲೂಕು ಅಧ್ಯಕ್ಷರು ಸತೀಶ್, ಪ್ರಧಾನ ಕಾರ್ಯದರ್ಶಿ ಅನುಕುಮಾರ್, ಕಾರ್ಯದರ್ಶಿ ಅಥೋಣಿ, ಉಪಾಧ್ಯಕ್ಷ ಶಿವಗೂಳಿಗೌಡ, ಕಸಬಾ ಮುತ್ತಪ್ಪ, ಶ್ರೀನಿವಾಸ್‌, ಶಿವರಾಜು, ರಮೇಶ್, ವಿನೋದ್, ಪುಟ್ಟಸ್ವಾಮಿ, ವೆಂಕಟೇಶ್, ಚನ್ನಪಟ್ಟಣ ತಾಲ್ಲೂಕು ತಮ್ಮಣ್ಣ ಸೇರಿದಂತೆ ಹಾರೋಹಳ್ಳಿ ಚನ್ನಪಟ್ಟಣ, ಮಾಗಡಿ, ರಾಮನಗರ ತಾಲ್ಲೂಕಿನ ಹಿರಿಯ ರೈತ ಮುಖಂಡರು ಉಪಸ್ಥಿತರಿದ್ದರು.ರೈತ ಸಮಾವೇಶದ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT