ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರಿಗೆ ಮುನ್ನವೇ ಚುರುಕುಗೊಂಡ ಕೃಷಿ ಚಟುವಟಿಕೆ

ಬಿತ್ತನೆ ಬೀಜಗಳು, ಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ, ದಾಸ್ತಾನಿಗೆ ಕೃಷಿ ಇಲಾಖೆ ಆದ್ಯತೆ
Last Updated 9 ಮೇ 2022, 3:08 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಎರಡು ವಾರಗಳಿಂದ ಉತ್ತಮ ಮಳೆಯಾಗುತ್ತಿದೆ. ಪೂರ್ವ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಬೇಸಿಗೆಯ ಬಿಸಿಲ ಬೇಗೆಯಿಂದ ತತ್ತರಿಸಿದ್ದ ರೈತರಿಗೆ ಮಳೆಯಾಗಿರುವುದು ಸ್ವಲ್ಪ ಸಮಾಧಾನ ತಂದಿದೆ. ಮಳೆ ಬೀಳುತ್ತಿದ್ದಂತೆ ರೈತರು ಪೂರ್ವ ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಲು ಭೂಮಿ ಹದಮಾಡಿಕೊಳ್ಳಲು ಮುಂದಾಗಿದ್ದಾರೆ.

ಜಾನುವಾರಿಗೆ ಪ್ರಿಯವಾದ ಮೇವು ಭತ್ತ. ವರ್ಷಪೂರ್ತಿ ಆಹಾರವಾಗುವುದರಿಂದ ಮುಂಗಾರು ಹಂಗಾಮಿನಲ್ಲಿ ರೈತರು ಹೆಚ್ಚು ಭತ್ತ ಬೆಳೆಯುತ್ತಾರೆ. ಪ್ರಸಕ್ತಮುಸುಕಿನ ಜೋಳ, ರಾಗಿ, ತೊಗರಿ, ಅಲಸಂದೆ, ಶೇಂಗಾ ಸೇರಿ ವಿವಿಧ ಬೆಳೆ ಬಿತ್ತನೆ ಕಾರ್ಯ ನಡೆದಿದೆ. ಎರಡರಿಂದ ಮೂರು ಹದ ಮಳೆ ಬಿದ್ದರೆ,
ಜೋಳ ಬೆಳೆಯಲು ಅನುವಾಗುತ್ತದೆ. ಜಿಲ್ಲೆಯಲ್ಲಿ ಬಹಳಷ್ಟು ಮಂದಿ ರೈತರು ಬೇಸಿಗೆ ಬೆಳೆ ಬೆಳೆದಿದ್ದು, ಬೆಳೆ ಕಟಾವು ಮಾಡಿ, ಜಮೀನು ಮತ್ತೆ ಹಸನುಮಾಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಅತಿವೃಷ್ಟಿಯಿಂದ ಭತ್ತ, ಜೋಳ ಸೇರಿ ತೋಟಗಾರಿಕೆ ಬೆಳೆಗಳು ನೆಲಕಚ್ಚಿದ್ದವು. ಅತಿಯಾದ ಮಳೆಗೆ ಅಧಿಕ ಪ್ರಮಾಣದ ಕೃಷಿ ಬೆಳೆ ಹಾನಿಯಾಗಿತ್ತು. ಜತೆಗೆ ತಮ್ಮನ್ನು ಅವಲಂಬಿಸಿರುವ ಜಾನುವಾರಿನ ಮೇವಿಗೂ ಪರದಾಡುವಂತಾಗಿತ್ತು. ಈಗ ಕೆಲ ದಿನಗಳಲ್ಲಿ ಜಿಲ್ಲೆಯಾದ್ಯಂತ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.

ಜಿಲ್ಲೆಯಲ್ಲಿ ಈವೆರೆಗಿನ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ವಾಡಿಕೆಯಂತೆ ಮೇ ತಿಂಗಳ 6ರ ವರೆಗೆ 52.4 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಈ ಬಾರಿ 102 ಮಿ.ಮೀ. ಮಳೆಯಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಮುಸುಕಿನ ಜೋಳ, ಭತ್ತ, ರಾಗಿ, ಗೋಧಿ ಬೆಳೆಗಳ ಬಿತ್ತನೆ ಕಾರ್ಯ ನಡೆಯುತ್ತಿದೆ. ತಾಲ್ಲೂಕಿನ ಹವಾಗುಣಕ್ಕೆ ಅನುಗುಣವಾಗಿ
ಜಿಲ್ಲಾಡಳಿತ 1,33,115 ಹೆಕ್ಟೇರ್ ಪ್ರದೇಶದಲ್ಲಿ ಏಕದಳ, 409 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ, 1555 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಜಿಲ್ಲಾಡಳಿತ ಗುರಿ ಹೊಂದಿದೆ.

ನಿರೀಕ್ಷೆಗೆ ತಕ್ಕಂತೆ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಭರದಿಂದ ಸಾಗಿದೆ. ಅದಕ್ಕಾಗಿ ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಗೊಬ್ಬರ ಮತ್ತು ಬಿತ್ತನೆ ಬೀಜ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಜಿಲ್ಲಾಡಳಿತ ಕೂಡ ಕ್ರಮ ಕೈಗೊಂಡಿದೆ.

ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದಿನ 2-3 ತಿಂಗಳಿಗೆ ಆಗುವಷ್ಟು ದಾಸ್ತಾನು ಇದೆ. ಮುಂದಿನ ವಾರ
ದೊಳಗೆ ಮತ್ತಷ್ಟು ದಾಸ್ತಾನು ಬರಲಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎನ್ನುತ್ತಾರೆ ಕೃಷಿ
ಇಲಾಖೆ ಜಂಟಿ ನಿರ್ದೇಶಕ ಕಿರಣ್‌ಕುಮಾರ್‌.

ಮಳೆಗಾಲದಲ್ಲಿ ಬೆಳೆ ಕಾಡುವ ನೆರೆ ಹಾವಳಿ

ಎಂ. ರಾಘವೇಂದ್ರ

ಸಾಗರ: ತಾಲ್ಲೂಕಿನಲ್ಲಿ ಪ್ರತಿವರ್ಷ ಮುಂಗಾರಿನಲ್ಲಿ ಸುರಿಯುವ ಭಾರಿ ಮಳೆಯಿಂದ ವರದಾ ನದಿ ಉಕ್ಕಿ ಹರಿದು ತಾಳಗುಪ್ಪ ಹೋಬಳಿಯ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದ ಭತ್ತದ ಗದ್ದೆ ಸಂಪೂರ್ಣವಾಗಿ ಜಲಾವೃತಗೊಳ್ಳುವುದು ಸಾಮಾನ್ಯ ಸಂಗತಿ.

ಕಳೆದ ವರ್ಷದ ಮಳೆಗಾಲದಲ್ಲಿ ತಾಳಗುಪ್ಪ ಹೋಬಳಿಯಲ್ಲಿ 1,250 ಹೆಕ್ಟೇರ್, ಆನಂದಪುರಂ ಹೋಬಳಿಯಲ್ಲಿ 300 ಹೆಕ್ಟೇರ್, ಕಸಬಾ ಹೋಬಳಿಯಲ್ಲಿ 150 ಹೆಕ್ಟೇರ್, ಆವಿನಹಳ್ಳಿ ಹೋಬಳಿಯಲ್ಲಿ 20 ಹೆಕ್ಟೇರ್ ಭತ್ತದ ಗದ್ದೆ ಮಳೆ ಸೃಷ್ಟಿಸಿದ ಪ್ರವಾಹದ ನೀರಿನಲ್ಲಿ ಮುಳುಗಿಹೋಗಿತ್ತು. ಅಲ್ಲಲ್ಲಿ ಅಡಿಕೆ ತೋಟಗಳಿಗೂ ನೀರು ನುಗ್ಗಿ ಹಾನಿ ಉಂಟಾಗುತ್ತಿದೆ.

ತಾಳಗುಪ್ಪ ಹೋಬಳಿಯಲ್ಲಿ ವರದಾ ನದಿಯ ಪ್ರವಾಹ ತಡೆಗಟ್ಟಲು ಬ್ಯಾರೇಜ್ ನಿರ್ಮಿಸಿ ಮಳೆ ನೀರನ್ನು ಲಿಂಗನಮಕ್ಕಿ ಜಲಾಶಯದತ್ತ ಹರಿಸುವ ಯೋಜನೆಯ ಮಾತು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಅದು ಕೇವಲ ಭರವಸೆಯಾಗಿಯೇ ಉಳಿದಿದೆ.

ಮಳೆ ಹೆಚ್ಚಾದಾಗ ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಸನಗದ್ದೆ ಗ್ರಾಮ ನಾಗರಿಕ ಜಗತ್ತಿನ ಸಂಪರ್ಕ ಕಳೆದುಕೊಂಡು ನಡುಗುಡ್ಡೆಯಂತಾಗುತ್ತದೆ. ವಿವಿಧ ಪಕ್ಷಗಳ ರಾಜಕಾರಣಿಗಳು ಪೈಪೋಟಿ ರೀತಿಯಲ್ಲಿ ಈ ಭಾಗಕ್ಕೆ ಪಿಕ್‌ನಿಕ್ ಮಾದರಿಯಲ್ಲಿ ಭೇಟಿ ನೀಡುವುದು ಸಂಪ್ರದಾಯದಂತೆ ಆಗಿದೆ.

ಮೂರು ವರ್ಷಗಳ ಹಿಂದೆ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಇನ್ನೂ ಪರಿಹಾರದ ಹಣ ಕೈ ಸೇರಿಲ್ಲ. ಬೆಳೆ ನಷ್ಟ ಅನುಭವಿಸುವ ರೈತರು ಪರಿಹಾರ ಪಡೆಯಲು ಹರಸಾಹಸ ಮಾಡಬೇಕಾಗಿದೆ. ನಗರವ್ಯಾಪ್ತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಲೇ ಔಟ್ ನಿರ್ಮಿಸಿರುವುದರ ಪರಿಣಾಮ ಮಳೆಗಾಲದಲ್ಲಿ ಮನೆಯೊಳಗೆ ನೀರು ನುಗ್ಗುವ ಸ್ಥಿತಿ ನಿರ್ಮಾಣವಾಗಿದೆ.

ಮುಂಗಾರು ವೇಳೆ ನೆನಪಾಗುವ ಗುಡ್ಡಗಳು

ನಿರಂಜನ ವಿ.

ತೀರ್ಥಹಳ್ಳಿ: ಮುಂಗಾರಿನಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಮಲೆ ಮಹದೇಶ್ವರ ದೇವರ ಗುಡ್ಡ ಜರಿದು ಹಾನಿಯಾದ ಕೃಷಿ ಭೂಮಿಗೆ ಪರಿಹಾರ ಸಿಗಲಿಲ್ಲ. ಅಂದಿನ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂಪ್ಪ ಅವಧಿಯಲ್ಲೇ ಭರವಸೆ ಸಿಕ್ಕರೂ ಸಂತ್ರಸ್ತರ ಕಣ್ಣೀರು ಕಡಿಮೆಯಾಗಿಲ್ಲ.

ತಾಲ್ಲೂಕಿನ ಸಿಂಗನಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗಲತ್ತಿ ಗ್ರಾಮದ ಸರ್ವೆ ನಂಬರ್‌ 48, 49, 21ರ ಖಾತೆ ಜಮೀನಿಗೆ 2019 ಆಗಸ್ಟ್ 10ರ ರಾತ್ರಿ ಏಕಾಏಕಿ ಬೃಹತ್ ಮಣ್ಣು ಸೇರಿತು. ಊರೆಲ್ಲ ನಿದ್ದೆಗೆ ಜಾರಿದ ಸಂದರ್ಭದಲ್ಲಿ ಜರಿದ ಗುಡ್ಡದ ಭೀಕರ ಸದ್ದಿಗೆ ಜನ ನಡುಗಿಹೋಗಿದ್ದರು.

ಜಾರಿದ ಗುಡ್ಡ ಹೊತ್ತು ತಂದ ಮರದ ದಿಮ್ಮಿ, ಸುಮಾರು 18 ವರ್ಷಗಳಿಂದ ಮಕ್ಕಳಂತೆ ಸಾಕಿದ್ದ ಅಡಿಕೆ ಮರ, ಭಾರಿ ಗಾತ್ರದ ಕಲ್ಲುಗಳು ಸುಮಾರು 1 ಕಿ.ಮೀ. ದೂರಕ್ಕೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಜಮೀನಿನಲ್ಲಿ ಇದ್ದ 3 ಕೊಳವೆಬಾವಿ ಸೇರಿ 20 ಅಡಿ ಅಗಲವಾದ ಬಾವಿ ಕೂಡ ಮೂರು ವರ್ಷಗಳು ಕಳೆದರೂ ಸಿಕ್ಕಿಲ್ಲ. ಜಾನುವಾರಿನ ರಕ್ಷಣೆಗೆ ಮಾಡಿದ್ದ ಕಲ್ಲುಕಂಬದ ತಂತಿ ಬೇಲಿ ಕೊಚ್ಚಿ ಹೋಗಿದೆ. ನರೇಗಾ ಯೋಜನೆಯಲ್ಲಿ ಅಲ್ಪ ಪ್ರಮಾಣದ ಕೆಲಸ ಮಾಡಲಾಗಿದೆ. ಅನ್ನ ನೀಡುವ ಜಮೀನು ನೋಡಲು ಸಾಧ್ಯವಾಗದೆ ನಾವೇ ಸಾಲ ಮಾಡಿ ಜೆಸಿಬಿ ಮೂಲಕ ಗದ್ದೆಯಾಗಿ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಸಂತ್ರಸ್ತರಾದ ಗುರುಪ್ರಸಾದ್.

ಎಕರೆಗೆ 35 ಸಾವಿರ ಹಣ ನೀಡಿ ಕೈತೊಳೆದುಕೊಂಡ ಸರ್ಕಾರದ ಭರವಸೆಯ ನಾಟಕ ಬಹಿರಂಗವಾಗಿದೆ. ಒಂದು ತಿಂಗಳು ಕೆಲಸಬಿಟ್ಟು ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿ, ದಾಖಲೆ ನೀಡಿದ್ದರಾದರೂ ಪ್ರಯೋಜನವಾಗಿಲ್ಲ. ಗ್ರಾಮ ಲೆಕ್ಕಾಧಿಕಾರಿ, ಆರ್‌ಐ ಬಿಟ್ಟರೆ ಸಮಸ್ಯೆ ಕೇಳಲು ಉನ್ನತ ಅಧಿಕಾರಿಗಳು ಬರಲಿಲ್ಲ. ಆ ಹೊತ್ತಿನ ಸರ್ಕಾರದ ಮುಖ್ಯ ಕಾರ್ಯದರ್ಶಿ, ಉಸ್ತುವಾರಿ ಸಚಿವರು ಗುಡ್ಡ ವೀಕ್ಷಿಸಿ ಭರಪೂರ ಭರವಸೆ ನೀಡಿದ್ದರು ಎನ್ನುತ್ತಾರೆ ಗ್ರಾಮಸ್ಥರಾದ ಈಶ್ವರಪ್ಪ.

ಖಾಸಗಿ ಸಹಾಯವೇ ಉತ್ತಮ: ಗುಡ್ಡದ ತಪ್ಪಲಿನಲ್ಲಿ ಗೋಪಾಲ ಪೂಜಾರಿ ಅವರ ಕುಟುಂಬ 40 ವರ್ಷಗಳಿಂದ ವಾಸವಾಗಿದ್ದರೂ ದಾಖಲೆ ನೀಡಲು ಆಡಳಿತ ವಿಫಲವಾಗಿದೆ. ದಾಖಲೆ ಇಲ್ಲದ ಸಂತ್ರಸ್ತನ ಕೈ ಹಿಡಿಯಲು ಪ್ರಗತಿಪರ ಕೃಷಿಕ ಕಡಿದಾಳು ದಯಾನಂದ್, ಮಲ್ನಾಡ್ ಕ್ಲಬ್, ತುಂಗಾ ಮಹಾವಿದ್ಯಾಲಯ, ವಿಹಂಗಮ ಪರಿಸರ ಅಧ್ಯಯನ ಕೇಂದ್ರ ಸೇರಿ ಸಂಘ ಸಂಸ್ಥೆಗಳು, ಸಾರ್ವಜನಿಕರು, ವೈಯುಕ್ತಿಕ ದೇಣಿಗೆ ನೀಡಿದ್ದಾರೆ. ₹ 2.5 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ 2 ಎಕರೆ ಜಮೀನಿಗೆ
ಭದ್ರವಾದ ಕಲ್ಲುಕಂಬ, ತಂತಿಬೇಲಿ, ತೋಟಗಾರಿಕಾ ಇಲಾಖೆ ನೀಡಿದ 65 ಗೇರು ಗಿಡ, 350 ಬಾಗಲಕೋಟ್ ತಳಿಯ ನುಗ್ಗೆ ಗಿಡಗಳನ್ನು ನೆಡಲಾಗಿದ್ದು, ಫಸಲು ನೀಡಲು ತಯಾರಾಗುತ್ತಿದೆ.

***

ಸಂತ್ರಸ್ತ ಕುಟುಂಬಗಳಿಗೆ ಸಿಂಗನಬಿದರೆ ಗ್ರಾಮ ಪಂಚಾಯಿತಿ ಸರ್ವೆ ನಂಬರ್‌ 35ರಲ್ಲಿ ನಿವೇಶನ ನೀಡುವ ಭರವಸೆ ನೀಡಲಾಗಿದೆ. ಉದ್ಯೋಗ ಖಾತ್ರಿ ಕೆಲಸದ ಹಣ ಸಂದಾಯವಾಗಿದ್ದು, ಮೆಟೀರಿಯಲ್‌ ಹಣ ಬಿಡುಗಡೆಯಾಗಿಲ್ಲ. 1968ರಿಂದ ವಾಸವಿರುವ ಕುಟುಂಬಗಳಿಗೆ ಸರ್ಕಾರ ಅನ್ಯಾಯ ಮಾಡಬಾರದು.

ಕೀಗಡಿ ಕೃಷ್ಣಮೂರ್ತಿ, ಸ್ಥಳೀಯ ಮುಖಂಡ

ಹೆಗಲತ್ತಿ ಸಂತ್ರಸ್ತರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಕೃಷಿ ಜಮೀನು ಮರು ಚೇತರಿಕೆಗೊಳ್ಳುವ ಕನಸು ಹೊತ್ತುಕೊಂಡಿರುವ ರೈತರಲ್ಲಿ ಸರ್ಕಾರದ ದ್ವಂದ್ವ ನಿಲುವು ನಿರಾಸೆ ಮೂಡಿಸಿದೆ. ಸ್ನೇಹಿತರೆಲ್ಲ ಕೂಡಿ ದಾಖಲೆ ಇಲ್ಲದ ವೃದ್ಧ ಗೋಪಾಲ ಪೂಜಾರಿಗೆ ಸಹಾಯ ಮಾಡಿದ್ದೇವೆ. ಆಡಳಿತ ಗೃಹ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು.

ಕಡಿದಾಳು ದಯಾನಂದ, ಪ್ರಗತಿಪರ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT