ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಹೋಬಳಿ ಕೋಡ್ಲು ಗ್ರಾಮದಲ್ಲಿ ಉಕ್ಕಿ ಹರಿಯುವ ನದಿಯ ನೀರಿನಲ್ಲಿಯೇ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ಶವ ಹೊತ್ತು ಸಾಗುವ ವಿಡಿಯೊ ಈಗ ವೈರಲ್ ಆಗಿದೆ.
ತಮ್ಮಯ್ಯಗೌಡ
ಗ್ರಾಮದ ಹಿರಿಯರಾದ ತಮ್ಮಯ್ಯಗೌಡ (92) ವಯೋಸಹಜ ಅನಾರೋಗ್ಯದಿಂದ ಶನಿವಾರ ಮೃತಪಟ್ಟಿದ್ದಾರೆ. ಸಂಜೆ ಅವರ ಶವವನ್ನು ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಭಾರೀ ಮಳೆಯಿಂದಾಗಿ ಮಾಲತಿ ನದಿ ಉಕ್ಕಿ ಹರಿದಿದ್ದು, ಸ್ಮಶಾನ ಕೂಡ ಜಲಾವೃತವಾಗಿದೆ.
ಹೀಗಾಗಿ ಗ್ರಾಮಸ್ಥರು ಎದೆಯಮಟ್ಟದವರೆಗೆ ಹರಿಯುತ್ತಿದ್ದ ನೀರಿನಲ್ಲಿಯೇ ಶವವನ್ನು ಸ್ಮಶಾನಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ತಮ್ಮಯ್ಯ ಗೌಡರು ರೈತ ಹೋರಾಟದಲ್ಲಿ ಗುರುತಿಸಿಕೊಂಡಿದ್ದು, ಕಾಗೋಡು ಸತ್ಯಾಗ್ರಹದ ವೇಳೆ 17 ದಿನಗಳ ಕಾಲ ಬೆಂಗಳೂರಿಗೆ ಪಾದಯಾತ್ರೆಯಲ್ಲಿ ತೆರಳಿ ಈ ಭಾಗದಲ್ಲಿ ರೈತ ಮುಖಂಡನಾಗಿ ಗುರುತಿಸಿಕೊಂಡಿದ್ದರು.