ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ | ಪಕ್ಷ ವಿರೋಧಿ ಚಟುವಟಿಕೆ ಆರೋಪ: ಎಪಿಎಂಸಿ ಸದಸ್ಯ ದಿನೇಶ್ ಉಚ್ಚಾಟನೆ

Last Updated 4 ಜುಲೈ 2020, 12:19 IST
ಅಕ್ಷರ ಗಾತ್ರ

ಶಿವಮೊಗ್ಗ: ಕೃಷಿ ಉತ್ಪನ್ನ ಮಾರಾಟ ಸಮಿತಿ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎಚ್‌.ಸಿ.ಬಸವರಾಜಪ್ಪ ಬುಳ್ಳಾಪುರ ಹಾಗೂ ಅವರ ಪುತ್ರ ಎಪಿಎಂಸಿ ಸದಸ್ಯ ದಿನೇಶ್ ಅವರನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ಉಚ್ಚಾಟನೆ ಮಾಡಿದ್ದಾರೆ.

ಎಪಿಎಂಸಿ ಆಡಳಿತ ಮಂಡಳಿಗೆ ಜುಲೈ 1ರಂದು ನಡೆದ ಚುನಾವಣೆಯಲ್ಲಿ ಬಹುಮತ ಹೊಂದಿದ್ದರೂ ಬಿಜೆಪಿ ಗುಂಪಿನ ಅಭ್ಯರ್ಥಿ ಟಿ.ಬಿ.ಜಗದೀಶ್ ಸೋಲು ಕಂಡಿದ್ದರು. 17 ಸದಸ್ಯ ಬಲದ ಎಪಿಎಂಸಿಯಲ್ಲಿ ಬಿಜೆಪಿ ಗುಂಪಿನ 9 ಹಾಗೂ ಕಾಂಗ್ರೆಸ್, ಜೆಡಿಎಸ್ ಗುಂಪಿನ‌ 8 ಸದಸ್ಯರಿದ್ದರು. ಆದರೆ, ಫಲಿತಾಂಶ ಪ್ರಕಟವಾದಾಗ ಜೆಡಿಎಸ್ ದುಗ್ಗಪ್ಪಗೌಡ ಅಧ್ಯಕ್ಷ, ಕುಂಸಿ ಬಾಬಣ್ಣ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಒಬ್ಬರು ಅಡ್ಡ ಮತದಾನ ಮಾಡಿರುವುದು ಖಚಿತವಾಗುತ್ತಿದ್ದಂತೆ ಬಿಜೆಪಿ ಗುಂಪಿನ ಎಲ್ಲ 9 ಸದಸ್ಯರನ್ನೂ ಸಿಗಂಧೂರು ದೇವಿ ಸನ್ನಿಧಿಗೆ ಕರೆದುಕೊಂಡು ಹೋಗಿ ಪ್ರಮಾಣ ಮಾಡಿಸಲಾಗಿತ್ತು. ಎಲ್ಲರೂ ಪಕ್ಷದ ಅಭ್ಯರ್ಥಿಗೇ ಮತ ಹಾಕಿದ್ದೇವೆ ಎಂದು ಪ್ರಮಾಣ ಮಾಡಿದ್ದರು. ಇದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.

ಅಡ್ಡ ಮತದಾನ ಮಾಡಿದ ಪಕ್ಷ ವಿರೋಧಿಗಳನ್ನು ಪತ್ತೆ ಹಚ್ಚಲು ಮುಖಂಡರು ಹರಸಾಹಸ ಮಾಡಿದ್ದರು. ಅದಕ್ಕಾಗಿಯೇ ಸತ್ಯ ಶೋಧನಾ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಸದಸ್ಯರ ಸಂಶಯಾಸ್ಪದ ನಡವಳಿಕೆ, ಹೇಳಿಕೆಗಳ ಆಧಾರದ ಮೇಲೆ ವರದಿ ಸಿದ್ಧಪಡಿಸಿ ಶಿಸ್ತು ಸಮಿತಿಗೆ ಸಲ್ಲಿಸಿತ್ತು. ಅದರ ಆಧಾರದ ಮೇಲೆ ಅಡ್ಡ ಮತದಾನ ಮಾಡಿದ ದಿನೇಶ್‌ ಅವರನ್ನು ಅವರಿಗೆ ಸಹಕಾರ ನೀಡಿದ ಅವರ ತಂದೆ ಬಸವರಾಜಪ್ಪ ಅವರ ವಿರುದ್ಧವೂ ಮೇಘರಾಜ್‌ ಕ್ರಮ ಕೈಗೊಂಡಿದ್ದಾರೆ. ಬಸವರಾಜಪ್ಪ ಹಿಂದೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಬಿಜೆಪಿ ಗುಂಪಿನ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಗದೀಶ್ ಅವರು ವಿಧಾನ ಸಭಾ ಚುನಾವಣೆ ಸಮಯದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. ಈಗ ಅದೇ ಜೆಡಿಎಸ್‌ ಕಾಂಗ್ರೆಸ್ ಜತೆಗೂಡಿ ಅಂದು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ಅವರನ್ನು ಸೋಲಿಸುವ ಮೂಲಕ ತಿರುಗೇಟು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT