ಶಿವಮೊಗ್ಗ: ಬೇಸಿಗೆ ಹಂಗಾಮಿನಲ್ಲಿ ಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ಜನವರಿ 10ರಿಂದ ಹಾಗೂ ಬಲದಂಡೆ ಕಾಲುವೆಗೆ ಜನವರಿ 20ರಿಂದ ನೀರು ಹರಿಸಲು ಶನಿವಾರ ಇಲ್ಲಿನ ಮಲವಗೊಪ್ಪದಲ್ಲಿನ ಕಾಡಾ ಕಚೇರಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ತೀರ್ಮಾನಿಸಿತು.
71.535 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 35.370 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಇದರಲ್ಲಿ 13.83 ಟಿಎಂಸಿ ಅಡಿ ಡೆಡ್ ಸ್ಟೋರೇಜ್ ಇದ್ದು, ಬಳಕೆಗೆ ಬರುವುದಿಲ್ಲ. ಉಳಿದ 21.54 ಟಿಎಂಸಿ ಅಡಿ ನೀರಿನ ಸಂಗ್ರಹದಲ್ಲಿ ಕುಡಿಯಲು ಹಾಗೂ ಕೈಗಾರಿಕಾ ಉದ್ದೇಶಕ್ಕೆ 6.90 ಟಿಎಂಸಿ ಅಡಿ ಮೀಸಲಿದ್ದು, ಜನವರಿಯಿಂದ ಮೇ ತಿಂಗಳವರೆಗೆ ಜಲಾಶಯದಿಂದ ಆವಿಯಾಗುವ ನೀರಿನ ಪ್ರಮಾಣ 1.91 ಟಿಎಂಸಿ ಅಡಿ ಇದೆ. ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಗೆ 0.11 ಟಿಎಂಸಿ ಅಡಿ ಹರಿಸಲಾಗುತ್ತಿದ್ದು, ಉಳಿದ 12.62 ಟಿಎಂಸಿ ಅಡಿ ನೀರನ್ನು ಭದ್ರಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ 47 ದಿನಗಳಿಗೆ ಮಾತ್ರ ಹರಿಸಬಹುದು ಎಂಬುದನ್ನು ಐಸಿಸಿ ಸಭೆ ಗಣನೆಗೆ ತೆಗೆದುಕೊಂಡಿತು.
ಲಭ್ಯವಿರುವ ನೀರನ್ನು ಆನ್ ಅಂಡ್ ಆಫ್ ವ್ಯವಸ್ಥೆಯಲ್ಲಿ ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೆ ದಾವಣಗೆರೆ, ಭದ್ರಾವತಿ, ಮಲೆಬೆನ್ನೂರು ವಿಭಾಗದ 31739 ಹೆಕ್ಟೇರ್ ತೆಂಗು ಹಾಗೂ ಅಡಿಕೆ ಬೆಳೆಗಳ ರಕ್ಷಣೆಗೆ ಬಳಕೆ ಮಾಡಲು ಐಸಿಸಿ ಸಭೆ ತೀರ್ಮಾನಿಸಿತು.
ಐಸಿಸಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ವಿಜಯನಗರ ಜಿಲ್ಲೆ ಹರಪನಹಳ್ಳಿಯ ಶಾಸಕರು, ಅಧಿಕಾರಿ ವರ್ಗ ಹಾಗೂ ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.