ತೀರ್ಥಹಳ್ಳಿ: ರೋಗ ನಿಯಂತ್ರಣದ ಕೃಷಿ ಔಷಧವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಸರ್ಕಾರದ ಗಮನಕ್ಕೆ ಬಂದಿದೆ. ನಿಯಂತ್ರಣ ಮಾಡದಿದ್ದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.
ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಇಳಿಮನೆ ಸೇರಿ ವಿವಿಧೆಡೆ ಎಲೆಚುಕ್ಕಿ ರೋಗ ಬಾಧಿತ ತೋಟಗಳಿಗೆ ಸೋಮವಾರ ಭೇಟಿ ನೀಡಿ ರೈತರು, ಅಧಿಕಾರಿಗಳೊಂದಿಗೆ ಚರ್ಚಿಸಿದರು.
‘ರೈತರೊಂದಿಗೆ ಸರ್ಕಾರ ಇದೆ. ತೋಟಗಾರಿಕಾ ಸಚಿವರಿಗೆ ಮನವಿ ಮಾಡಿದ್ದೇನೆ. ರೋಗ ನಿಯಂತ್ರಣ ಔಷಧಗೆ ಸರ್ಕಾರದ ಸಹಾಯಧನ ನೀಡಲು ಚರ್ಚೆ ನಡೆಯುತ್ತಿದೆ’ ಎಂದು ಹೇಳಿದರು.
ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡಲು ಕಾರಣವಾದ ಅಂಶಗಳ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯ ಇದೆ. ರೈತರು ಧೃತಿಗೆಡದೆ ರೋಗ ನಿಯಂತ್ರಣದ ಕಡೆ ನಿಗಾವಹಿಸಬೇಕು. ಈ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಕೃಷಿ ವಿಶ್ವವಿದ್ಯಾಲಯ, ಅಡಿಕೆ ಸಂಶೋಧನಾ ಕೇಂದ್ರ, ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.