ಶಿವಮೊಗ್ಗ: ‘ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಆಸ್ತಿಗಳಿಗೆ ಆದ ಹಾನಿಯ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೋಮುಗಲಭೆಗಳ ನಿಯಂತ್ರಣಕ್ಕೆ ಉತ್ತರ ಪ್ರದೇಶದ ಬುಲ್ಡೋಜರ್ ಮಾದರಿ ಅನಗತ್ಯ. ಸಮಾಜದ ಶಾಂತಿಗೆ ಭಂಗ ತರುವವರ ವಿರುದ್ಧ ಕಾನೂನು ಪ್ರಕಾರವೇ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು.
‘ಉತ್ತರ ಪ್ರದೇಶದಲ್ಲಿ ಅಲ್ಲಿನ ಪರಿಸ್ಥಿತಿ ಅನುಗುಣವಾಗಿ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ನಾವು ನಮ್ಮ ನೆಲದ ನೀತಿ–ನಿಯಮಗಳ ಅನ್ವಯ ಕ್ರಮ ಕೈಗೊಂಡಿದ್ದೇವೆ’ ಎಂದು ಅವರು ಪ್ರತಿಕ್ರಿಯಿಸಿದರು.
ಪಂಚಮಸಾಲಿಗೆ 2ಎ ಮೀಸಲಾತಿ ವರದಿ ಆಧರಿಸಿ ಕ್ರಮ –ಸಿ.ಎಂ
ಶಿವಮೊಗ್ಗ: ಪಂಚಮಸಾಲಿಗಳಿಗೆ ‘2 ಎ’ ಮೀಸಲಾತಿ ಸೌಲಭ್ಯ ನೀಡುವ ವಿಷಯ ಹಿಂದುಳಿದ ವರ್ಗಗಳ ಆಯೋಗದ ಮುಂದಿದೆ. ಸಮೀಕ್ಷಾ ವರದಿ ನೀಡಿದ ತಕ್ಷಣ ಕ್ರಮಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜದ ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ ಕುಟುಂಬಕ್ಕೆ ನೆರವಿನ ಹಣ ಸಂಗ್ರಹಿಸುತ್ತಿರುವುದು ಸಂಘಟನೆಗಳ ವೈಯಕ್ತಿಕ ವಿಚಾರ ಎಂದರು.