ಸಾಗರ: ಇಲ್ಲಿನ ಉದಯ ಕಲಾವಿದರು ಸಂಸ್ಥೆಯ ಹಿರಿಯ ರಂಗಕರ್ಮಿ ಹಾಲಪ್ಪ (80) ಬುಧವಾರ ವಿನೋಬ ನಗರ ಬಡಾವಣೆಯ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಅಂತ್ಯಸಂಸ್ಕಾರ ಬುಧವಾರ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು.
ಉದಯ ಕಲಾವಿದರು ರಂಗ ತಂಡದಲ್ಲಿ ದೀರ್ಘಕಾಲ ಕೆಲಸ ಮಾಡಿದ ಹಾಲಪ್ಪ ಅವರು ‘ಏನ ಬೇಡಲಿ ನಿನ್ನ ಬಳಿಗೆ ಬಂದು’, ‘ಕತ್ತಲೆ ಬೆಳಕು’, ‘ಪ್ರಪಂಚ ಪಾಣಿಪತ್’, ‘ಸೌಭಾಗ್ಯವತಿ ಭವ’, ‘ ರಂಗ ಭಾರತ’, ‘,ಮೂರು ಕಾಸಿನ ಆಟ’, ‘ ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಸೇರಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು.
ನಟನೆಯ ಜೊತೆಗೆ ರಂಗಭೂಮಿಯಲ್ಲಿ ಸಂಘಟಕರಾಗಿಯೂ ಅವರು ಹೆಸರು ಮಾಡಿದ್ದರು. ಹವ್ಯಾಸಿ ರಂಗತಂಡಗಳು ಯಾವ ರೀತಿ ತಮ್ಮ ತಂಡದ ಲೆಕ್ಕಪತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ರಂಗ ಪರಿಕರಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕು ಎನ್ನುವುದನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುವುದರಲ್ಲಿ ಅವರು ಸಿದ್ಧಹಸ್ತರಾಗಿದ್ದರು. ಇಲ್ಲಿನ ಸಾಂಸ್ಕೃತಿಕ ಸಂಘಟನೆ ‘ಒಡನಾಟ’ದಲ್ಲೂ ಅವರು ಸಕ್ರಿಯರಾಗಿದ್ದರು.