ಶಿವಮೊಗ್ಗ: ಸೈನ್ಸ್ ಮೈದಾನದಲ್ಲಿ ಮಾ.20ರಂದು ನಡೆಯಲಿರುವ ರೈತರ ಮಹಾ ಪಂಚಾಯತ್ನಲ್ಲಿ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಹೇಳಿದರು.
ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಕೇವಲ ರೈತ ಚಳವಳಿ ಮಾತ್ರವಲ್ಲ. ಅನ್ನ ಉಣ್ಣುವ ಎಲ್ಲರು ಪಕ್ಷಾತೀತವಾಗಿ ಮಹಾಪಂಚಾಯತ್ನಲ್ಲಿ ಭಾಗವಹಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ, ಶಿವಮೊಗ್ಗ ನೆಲದಿಂದಲೇ ಚಳವಳಿ ಆರಂಭವಾಗುತ್ತಿದೆ. ರಾಷ್ಟ್ರೀಯ ರೈತ ಮುಖಂಡರಾದ ರಾಕೇಶ್ ಟಿಕಾಯಿತ್, ಯಧುವೀರ ಸಿಂಗ್, ಡಾ.ದರ್ಶನ್ ಪಾಲ್, ಜಗಮೋಹನ್ ಸಿಂಗ್ ಭಾಗವಹಿಸುವರು ಎಂದರು.
‘ನಾವು ಸರ್ಕಾರ ಬೀಳಿಸಲು ಹೊರಟಿಲ್ಲ. ಕಾಯ್ದೆ ವಾಪಸ್ ಪಡೆಯಬೇಕು. ಬಂಡಾವಳ ಶಾಹಿಗಳಿಗೆ ಭೂಮಿ, ಜಲ ನೀಡಬಾರದು. ಸಾಮಾನ್ಯ ಜನ ಜೀವನ, ರಾಷ್ಟ್ರವನ್ನು ಉಳ್ಳವರ ಹಿಡಿತದಿಂದ ರಾಷ್ಟ್ರವನ್ನು ಕಾಪಾಡಬೇಕಾಗಿದೆ. ಆರ್ಎಸ್ಎಸ್ ಮುಖಂಡರು, ಬಿಜೆಪಿಯ ರೈತ ಮುಖಂಡರು ಸಹ ಈ ಕಾಯ್ದೆ ವಿರೋಧಿಸುತ್ತಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರುಸರ್ವಾಧಿಕಾರಿ ಧೋರಣೆ ತಾಳಿ ಸುಗ್ರಿವಾಜ್ಞೆಯ ಮೂಲಕ ಈ ಕಾಯ್ದೆ ತಂದಿದ್ದಾರೆ ಎಂದು ಆರೋಪಿಸಿದರು.
ರೈತ ಮುಖಂಡ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಮತ್ತೊಮ್ಮೆ ರೈತ ಚಳವಳಿ ಈ ನಾಡಿನಲ್ಲಿ ಮತ್ತು ರಾಷ್ಟ್ರದಲ್ಲಿ ಮತ್ತಷ್ಟು ಪ್ರಬಲಗೊಳಿಸಲು ಮೋದಿ ಕಾರಣರಾಗಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆಗಳು ಈ ಮೂಲಕ ರೈತ ಚಳವಳಿ ಮತ್ತೆ ಮತ್ತೆ ಜೀವ ಪಡೆದುಕೊಳ್ಳುತ್ತಿದೆ ಎಂದರು.
ರೈತ ಮುಖಂಡ ಕಡಿದಾಳ್ ಶಾಮಣ್ಣ ಮಾತನಾಡಿ, ಈ ಚಳವಳಿಗೆ ಸಂಪೂರ್ಣ ಬೆಂಬಲವಿದೆ. ರೈತ ಹೋರಾಟ ಯಶಸ್ವಿಯಾಗಲಿ. ರೈತ ಮುಖಂಡರು ಒಂದಾಗಿದ್ದು, ತುಂಬಾ ಸಂತೋಷದ ವಿಷಯ. ಸರ್ಕಾರ ರೈತರನ್ನು ಮತಬ್ಯಾಂಕ್ ಆಗಿ ಕಾಣುವುದನ್ನು ನಿಲ್ಲಿಸಬೇಕು. ಅನ್ನದಾತನನ್ನು ಅಂತಃಕರಣದಿಂದ ನೋಡದ ಸರ್ಕಾರಗಳು ಅಧಿಕಾರಿದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಕೆ.ಪಿ.ಶ್ರೀಪಾಲ್, ಕೆ.ಎಸ್.ಅಶೋಕ್, ಎಚ್.ಎಸ್.ಸುಂದರೇಶ್, ಎನ್.ರಮೇಶ್, ವಿಶ್ವನಾಥ್ ಕಾಶಿ, ಶಿವಕುಮಾರ್, ಹಾಲೇಶಪ್ಪ, ಯೋಗೀಶ್, ರಮೇಶ್ಹೆಗ್ಡೆ, ಪಾಲಾಕ್ಷಿ, ಚಂದ್ರಪ್ಪ ಇದ್ದರು.