ಶಿವಮೊಗ್ಗ: ಇಲ್ಲಿನ ಶೇಷಾದ್ರಿಪುರಂನ ಶಂಕರಮಠ ರಸ್ತೆಯಲ್ಲಿರುವ ರಾಹುಲ್ ಹುಂಡೈ ಶೋ ರೂಂನಲ್ಲಿ ಶುಕ್ರವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿ 3 ಕಾರುಗಳು ಸುಟ್ಟು ಭಸ್ಮವಾಗಿವೆ. ಶೋ ರೂಂ ಹೊರಗೆ ನಿಲ್ಲಿಸಿದ್ದ ನಾಲ್ಕು ಕಾರುಗಳಿಗೆ ಭಾಗಶಃ ಹಾನಿಯಾಗಿದೆ. ಶೋರೂಂ ಕಟ್ಟಡ ಬೆಂಕಿಯಿಂದ ಹಾನಿಗೀಡಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಆದರೆ ಅದನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ಖಚಿತಪಡಿಸಿಲ್ಲ.
ಶೋ ರೂಂನಲ್ಲಿ ಕೆಲಸಗಾರರು ಯಾರೂ ಇರಲಿಲ್ಲ. ಭದ್ರತಾ ಕೆಲಸಗಾರರು ಮಾತ್ರ ಇದ್ದರು. ಹೀಗಾಗಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಆದರೆ ಕಟ್ಟಡ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಸ್ವತ್ತುಗಳು ನಾಶವಾಗಿವೆ ಎಂದು ತಿಳಿದುಬಂದಿದೆ.
ಬೆಂಕಿ ಅವಘಡ ಸಂಭವಿಸುತ್ತಿದ್ದಂತೆಯೇ ಶಿವಮೊಗ್ಗದಿಂದ ಎರಡು, ಭದ್ರಾವತಿ ಹಾಗೂ ತರೀಕೆರೆಯಿಂದ ತಲಾ ಒಂದೊಂದು ಅಗ್ನಿ ಶಮನ ವಾಹನಗಳು ಬಂದು ಬೆಂಕಿ ನಂದಿಸಿದವು.
"ಬೆಂಕಿ ಸಂಪೂರ್ಣ ತಹಬದಿಗೆ ಬಂದಿದೆ. ಶೋ ರೂಂನ ಒಳ ಭಾಗದಲ್ಲಿ ಕೆಲವು ನಿರುಪಯುಕ್ತ ವಸ್ತುಗಳು, ಟೈರ್ ಗಳನ್ನು ಹಾಕಲಾಗಿದ್ದು, ಅಲ್ಲಿ ಮಾತ್ರ ಬೆಂಕಿ ಇದ್ದು, ಅದನ್ನು ಶೀಘ್ರ ನಂದಿಸಲಾಗುವುದು' ಎಂದು ಅಗ್ನಿಶಾಮಕ ಇಲಾಖೆ ಜಿಲ್ಲಾ ಅಧಿಕಾರಿ ಜಿ.ಮಹಾಲಿಂಗಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.