ಹೊಸನಗರ: ಸಮೀಪದ ಬೈಸೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿಯ ಕಾರ್ಯವೈಖರಿ ವಿರುದ್ಧ ದೂರು ನೀಡಿ ಬದಲಾವಣೆಗೆ ಪಟ್ಟು ಹಿಡಿದ ಕಾರಣ ಶಿಕ್ಷಣಾಧಿಕಾರಿಯು ಶುಕ್ರವಾರ ಶಾಲೆಗೆ ಭೇಟಿ ನೀಡಿ ಪೋಷಕರ ಅಹವಾಲು ಆಲಿಸಿದರು.
ಬೈಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಶಿಕ್ಷಕಿ ಉಷಾರಾಣಿ ಸಮಯ ಪಾಲನೆ ಮಾಡುತ್ತಿಲ್ಲ. ಅಲ್ಲದೇ ಮಕ್ಕಳಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಪೋಷಕರು ಶಿಕ್ಷಣಾಧಿಕಾರಿಗೆ ಈ ದೂರು ನೀಡಿ ಶಿಕ್ಷಕಿಯನ್ನು ಬದಲಾಯಿಸುವಂತೆ ಪಟ್ಟು ಹಿಡಿದಿದ್ದರು.
ಶಿಕ್ಷಣಾಧಿಕಾರಿ ಸಭೆ: ಪೋಷಕರ ದೂರಿನನ್ವಯ ಪೋಷಕರ ಜೊತೆ ಸಭೆ ನಡೆಸಿದ ಶಿಕ್ಷಣಾಧಿಕಾರಿ ಎಚ್.ಆರ್.ಕೃಷ್ಣಮೂರ್ತಿ ಪೋಷಕರ ಅಹವಾಲು ಆಲಿಸಿದರು. ಈ ವೇಳೆ ಬಹುತೇಕ ಪೋಷಕರು ಮುಖ್ಯಶಿಕ್ಷಕಿ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಶಿಕ್ಷಣಾಧಿಕಾರಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುವಂತೆ ಶಾಲಾಭಿವೃದ್ಧಿ ಸಮಿತಿಗೆ ಸೂಚಿಸಿದರು. ಅತಿಥಿ ಶಿಕ್ಷಕರ ನೇಮಕವಾದ ನಂತರ ಶಿಕ್ಷಕರನ್ನು ಬದಲಾಯಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.
ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ.ಕುಮಾರ್, ಅರುಣ, ಪ್ರಮುಖರಾದ ಬಿ.ವೈ.ಮಹೇಶ್, ಸುರೇಶ್, ಗಣೇಶ್, ಪ್ರವೀಣ ನಾಯ್ಕ್, ಎಸ್.ಪ್ರವೀಣ್, ರಾಕೇಶ್, ಮಂಜುನಾಥ್, ಚೇತನ, ಸುರೇಂದ್ರ, ಸಂತೋಷ್ ಇದ್ದರು.