ಶಿವಮೊಗ್ಗ: ಬಡವರ ಕಲ್ಯಾಣಕ್ಕಾಗಿ ಎಲ್ಲಾ ಸರ್ಕಾರಗಳು ಇಂದಿರಾಗಾಂಧಿ ಅವರ 20 ಅಂಶದ ಕಾರ್ಯಕ್ರಮಗಳನ್ನೇ ತಳಹದಿಯನ್ನಾಗಿ ಇಟ್ಟುಕೊಂಡಿವೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ 39ನೇ ಪುಣ್ಯಸ್ಮರಣೆ ಹಾಗೂ ಮಾಜಿ ಗೃಹಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 148ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿರಾಗಾಂಧಿ ಬಡವರ ಕಣ್ಮಣಿ. ಪ್ರಪಂಚ ಕಂಡ ಅತ್ಯಂತ ಪ್ರಭಾವಿ ಮಹಿಳಾ ಪ್ರಧಾನಿಯಾಗಿದ್ದರು. ದೇಶಕ್ಕಾಗಿಯೇ ತಮ್ಮ ಪ್ರಾಣ ಕೊಟ್ಟವರು ಎಂದು ಸ್ಮರಿಸಿದರು.
‘ಇಂದಿರಾಗಾಂಧಿ ಅವರಿಗೆ ದೂರದೃಷ್ಟಿ ಇತ್ತು. ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ನೀಡಿದವರು. ಅವರಿಲ್ಲದೆ ನಮಗೆ ಅನಾಥ ಪ್ರಜ್ಞೆ ಕಾಡುತ್ತಿದೆ’ ಎಂದು ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಹೇಳಿದರು.
ಸ್ವತಂತ್ರ ಭಾರತದಲ್ಲಿ ಅನೇಕ ಸಮಸ್ಯೆಗಳಿದ್ದವು. ಅವುಗಳನ್ನು ಬಗೆಹರಿಸಿದ ಕೀರ್ತಿ ಇಬ್ಬರಿಗೂ ಸಲ್ಲುತ್ತದೆ ಎಂದು ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ಹೇಳಿದರು.
ಕಾಂಗ್ರೆಸ್ ಮುಖಂಡರಾದ ಎಸ್.ಪಿ. ಶೇಷಾದ್ರಿ, ಮಹಾನಗರ ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ಎನ್.ಡಿ. ಪ್ರವೀಣ್ಕುಮಾರ್, ಯು. ಶಿವಾನಂದ್, ದೇವಿಕುಮಾರ್, ಪ್ರೇಮಾ, ಹಸನ್ಆಲಿಖಾನ್ ಅಫ್ರಿದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.