ಶಿಕಾರಿಪುರ:ಮಸೀದಿಗಳಲ್ಲಿ ಆಜಾನ್ ಕೂಗುವುದರಿಂದಶಬ್ದಮಾಲಿನ್ಯ ಉಂಟಾಗುತ್ತಿದ್ದು, ಸರ್ಕಾರ ಮಸೀದಿಗಳಲ್ಲಿನ ಧ್ವನಿವರ್ಧಕ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಗುರುವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
‘ಮಸೀದಿಯಲ್ಲಿ ಕೂಗುವ ಅಜಾನ್ನಿಂದ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ, ವಿದ್ಯಾರ್ಥಿಗಳಿಗೆ, ಜನರಿಗೆ ತೊಂದರೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಮಸೀದಿಗಳ ಧ್ವನಿವರ್ಧಕದಿಂದ ಉಂಟಾಗುವ ಶಬ್ದಮಾಲಿನ್ಯ ತಡೆಯುವಂತೆ ತೀರ್ಪು ನೀಡಿದೆ. ಆದರೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಮುತಾಲಿಕ್ ಪ್ರಶ್ನಿಸಿದರು.
‘ಶಬ್ದಮಾಲಿನ್ಯ ತಡೆಯಲು ಸುಪ್ರೀಂ ಕೋರ್ಟ್ ಅದೇಶವನ್ನು ಪಾಲಿಸುವಂತೆ ಮುಸ್ಲಿಮರಿಗೆ ಸರ್ಕಾರ ಹೇಳಬೇಕು. ಮುಸ್ಲಿಂ ರಾಷ್ಟ್ರಗಳನ್ನು ಸೇರಿ ಜಗತ್ತಿನ ಹದಿನಾರು ರಾಷ್ಟ್ರಗಳಲ್ಲಿ ಆಜಾನ್ ಕೂಗುವುದನ್ನು ನಿಷೇಧಿಸಲಾಗಿದೆ. ಆದರೆ ಭಾರತದಲ್ಲಿ ಯಾಕೆ ಬಂದ್ ಮಾಡುತ್ತಿಲ್ಲ. ಯಾಕೆ ಹೆದರಿಕೆ’ ಎಂದು ಪ್ರಶ್ನಿಸಿದರು.
ಶ್ರೀರಾಮ ಸೇನೆ ಆಂದೋಲನ ಆರಂಭಿಸಿದ್ದು, ಸರ್ಕಾರ ಎಚ್ಚರಗೊಂಡು ಮಸೀದಿಯಲ್ಲಿನ ಧ್ವನಿವರ್ಧಕ ತೆಗೆಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶಬ್ದಮಾಲಿನ್ಯ ಮಾಡದಂತೆ ಆದೇಶ ನೀಡಬೇಕು. ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ಈಶ್ವರಪ್ಪ, ಮುಖಂಡರಾದ ಎಸ್.ಎಂ. ಪ್ರಕಾಶ್, ಭವರ್ ಸಿಂಗ್, ಪರಶುರಾಮ್, ವಿ. ರಘು, ಗೊಲ್ಲರ ಸತೀಶ್, ಪ್ರದೀಪ್, ಮಂಜುಗಾಡಿ, ಶ್ರೀನಿವಾಸ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಗಿರೀಶ್ ಧಾರಾವಾಡ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬೆಣ್ಣೆ ಪ್ರವೀಣ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.