ಶಿವಮೊಗ್ಗ: ಭದ್ರಾವತಿಯಲ್ಲಿ ಬಿಜೆಪಿ ಈಚಿನ ದಿನಗಳಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಇದನ್ನು ಸಹಿಸದೇ ಕೆಲವರು ಪಕ್ಷದ ಮುಖಂಡರು, ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ದೂರಿದರು.
ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಮಂಗಳವಾರ ಪತ್ನಿ ಜಯಲಕ್ಷ್ಮಿ ಅವರ ಜತೆ ಕೋವಿಡ್ ಲಸಿಕೆ ಪಡೆದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಯಾರೂ ಗೂಂಡಾಗಿರಿ ಮಾಡಬಾರದು. ಶಾಸಕ ಬಿ.ಕೆ.ಸಂಗಮೇಶ್ವರ ಅವರು ಗೂಂಡಾಗಿರಿ ಬೆಂಬಲಿಸ ಬಾರದು.ಹಾಗೆ ಮಾಡಿದವರಿಗೆ ಬುದ್ಧಿಹೇಳಿ ಸರಿದಾರಿಗೆ ತರಬೇಕು. ಹಿಂದಿನ ಘಟನೆಗಳಿಂದ ಪಾಠ ಕಲಿಯಬೇಕು ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ 60 ವರ್ಷ ಮೇಲ್ಪಟ್ಟ, ಇತರೆ ಕಾಯಿಲೆಗಳಿಂದ ಬಳಲುತ್ತಿರುವ 59 ವರ್ಷದ ಒಳಗಿನ ಜನರಿಗೆ ಉಚಿತ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ₹ 250 ನೀಡಿ ತೆಗೆದುಕೊಳ್ಳಬೇಕು. ಮೂರು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಆರ್ಎಸ್ಎಸ್ ಮುಖಂಡ ಪಟ್ಟಾಭಿರಾಮ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್. ಜಯಲಕ್ಷ್ಮಿ ಈಶ್ವರಪ್ಪ ಉಪಸ್ಥಿತರಿದ್ದರು.