ಶಿವಮೊಗ್ಗ: ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಕಳೆದ 10 ತಿಂಗಳಲ್ಲಿ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಳ್ಳದೇ ದೂರ ಉಳಿದಿದ್ದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಪಕ್ಷದ ವೇದಿಕೆ ಏರಿದರು.
ಕುಮಾರ್ ಬಂಗಾರಪ್ಪ ಬರುತ್ತಿದ್ದಂತೆಯೇ ನೆರೆದವರು ಚಪ್ಪಾಳೆ, ಶಿಳ್ಳೆ, ಕೇಕೆ ಹಾಕಿ ಸ್ವಾಗತಿಸಿದರು. ಮಾಜಿ ಶಾಸಕರಿಗೆ ಮೀಸಲಿದ್ದ ಎರಡನೇ ಸಾಲಿನಲ್ಲಿ ಕುಳಿತ ಕುಮಾರ್ ಬಂಗಾರಪ್ಪ ಅವರನ್ನು ಸಂಸದ ಬಿ.ವೈ.ರಾಘವೇಂದ್ರ ಕರೆತಂದು ಮುಂದಿನ ಸಾಲಿನಲ್ಲಿ ಕೂರಿಸಿದರು.
ಕುಮಾರ್ ಬಂಗಾರಪ್ಪ ಬಿಜೆಪಿ ಬಿಡಲಿದ್ದಾರೆ. ಕಾಂಗ್ರೆಸ್ ಸೇರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಈ ಮೊದಲು ಹೇಳಲಾಗಿತ್ತು. ಗೀತಾ ಶಿವರಾಜ ಕುಮಾರ್ ಅವರಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಆ ವದಂತಿಗೆ ತೆರೆಬಿದ್ದಿತ್ತು. ಕುಮಾರ್ ಅವರನ್ನು ಉತ್ತರ ಕನ್ನಡದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುತ್ತಿದೆ ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆದಿದೆ.