ತೀರ್ಥಹಳ್ಳಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಒಂದು ಮತಕ್ಕೆ ₹ 25 ಸಾವಿರ ಕೊಡುವ ಸ್ಥಿತಿ ಇರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಜೆಡಿಯು ಅಧ್ಯಕ್ಷ ಮಹಿಮ ಪಟೇಲ್ ಬಹಿರಂಗಪಡಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಶಿವಮೊಗ್ಗದಿಂದ ಯಡಿಯೂರಪ್ಪ ಅವರ ಜತೆ ಈಚೆಗೆ ಬೆಂಗಳೂರಿಗೆ ಪ್ರಯಾಣ ಮಾಡುವಾಗ ಈ ವಿಷಯ ಪ್ರಸ್ತಾಪಿಸಿದ್ದರು. ಮತದಾರರೇ ಭ್ರಷ್ಟರಾಗಿದ್ದಾರೆ ಎಂದು ಬೇಸರ ತೋಡಿಕೊಂಡಿದ್ದರು ಎಂದರು.
ಭಾರತದಲ್ಲಿ ಚುನಾವಣಾ ಸುಧಾರಣೆ ತರುವ ಆವಶ್ಯಕತೆ ಇದೆ. ಪ್ರಜೆಗಳು ಭ್ರಷ್ಟಾಚಾರಕ್ಕೆ ಮೊದಲ ಏಣಿ ಹಾಕಿಕೊಡುತ್ತಿದ್ದಾರೆ. ಉಚಿತವಾಗಿ ಏನು ಲಾಭ ಎನ್ನುವ ಯೋಚನೆಗಳು ಆರಂಭವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.