ಆನಂದಪುರ: ದಸರಾ ಹಬ್ಬದ ಕೊನೆಯ ದಿನವಾದ ವಿಜಯದಶಮಿಯಂದು ದೇವರ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.
ಗ್ರಾಮ ದೇವತೆಗಳಾದ ತುಳುಜಾ ಭವಾನಿ, ಸುಬ್ರಹ್ಮಣ್ಯ, ವೀರಾಂಜನೇಯ, ಶ್ರೀರಂಗನಾಥ ಸ್ವಾಮಿ, ಯಲ್ಲಮ್ಮ ದೇವರು, ಪಾಂಡುರಂಗ, ಗುತ್ಯಮ್ಮ ದೇವರ ಪಲ್ಲಕ್ಕಿಗಳು ಆಯಾ ದೇವರ ಮೂಲ ಸನ್ನಿಧಾನದಲ್ಲಿ ಪೂಜೆ ನೇರವೇರಿಸಿದ ನಂತರ ಗುತ್ಯಮ್ಮ ದೇವಸ್ಥಾನದಲ್ಲಿ ಪ್ರಥಮ ಪೂಜೆ ಸಲ್ಲಿಸಲಾಯಿತು.
ಎಲ್ಲಾ ದೇವರ ಪಲ್ಲಕ್ಕಿಗಳು ರಾಜ ಬೀದಿ ಉತ್ಸವದೊಂದಿಗೆ ಮಹಂತಿನ ಮಠದ ಸಮೀಪದ ಬನ್ನಿ ಮಂಟಪಕ್ಕೆ ತೆರಳಿದವು. ಪೂಜೆಯ ನಂತರ ಬನ್ನಿ ಮುಡಿಯುವ ಕಾರ್ಯಕ್ರಮವನ್ನು ದಸರಾ ಉತ್ಸವ ಸಮಿಯ ಅಧ್ಯಕ್ಷ ಹಾಲಪ್ಪ ನೆರವೇರಿಸಿದರು.ಬನ್ನಿ ಮಂಟಪದಿಂದ ಹೊರಟ ದೇವರ ಮೆರಣಿಗೆ ಸಾಗಿದಾಗ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ದಸರಾ ಕುಸ್ತಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳ ಕುಸ್ತಿಪಟುಗಳು ಭಾಗವಹಿಸಿದ್ದರು. ಕಪ್ಪನಹಳ್ಳಿಯ ಸತೀಶ್ ಹಾಗೂ ತಾಳಗುಪ್ಪದ ಮಂಜು ಅವರಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲಾಯಿತು. ಸ್ಥಳೀಯ ಕುಸ್ತಿಪಟುಗಳು ಭಾಗವಹಿಸಿ ಕುಸ್ತಿ ಪಂದ್ಯಾವಳಿಗೆ ಮೆರುಗು ತಂದರು.
ದಸರಾ ಉತ್ಸವ ಸಮಿತಿಯ ಉಪಾಧ್ಯಕ್ಷರಾದ ಶೇಖರ್ ಪೂಜಾರಿ, ಸಂಚಾಲಕರಾದ ಮೋಹನ್ ಕುಮಾರ್, ರವಿ ಕುಮಾರ್ ಬಿ.ಡಿ, ಕಾರ್ತಿಕ್, ಸತೀಶ್, ದೇವರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಗಜೇಂದ್ರ, ಚೌಡಪ್ಪ, ದೇವಸ್ಥಾನದ ಸಮಿತಿಯ ಪ್ರಮುಖರಾದ ಜಗನ್ನಾಥ್ ಆರ್., ಹರೀಶ್, ಚರಣ್, ನಾಗರಾಜ್ ಇದ್ದರು.