ಕುಂಸಿ: ಸಾಕುನಾಯಿ ಕೊಂದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ.
ಸಮೀಪದ ಮಂಡಘಟ್ಟದಲ್ಲಿ ವಿಜಯ್ ಮತ್ತು ವಾಸುದೇವ್ ಅವರು ಈಚೆಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಅದೇ ಗ್ರಾಮದ ಹೇಮಂತ್ ಅವರು ಸಾಕಿದ್ದ ನಾಯಿ ಅಟ್ಟಿಸಿಕೊಂಡು ಬಂದಿದೆ. ಇನ್ನೇನು ಕಚ್ಚೇ ಬಿಟ್ಟಿತು ಎನ್ನುವಷ್ಟರಲ್ಲಿ ನಾಯಿಯನ್ನು ದೊಣ್ಣೆಯಿಂದ ಹೊಡೆದು ಮಂಡಘಟ್ಟದ ಮೂರನೇ ತಿರುವಿನಲ್ಲಿ ಎಸೆಯಲಾಗಿದೆ.
ವಿಷಯ ತಿಳಿದ ಹೇಮಂತ್ ಅವರು ವಿಜಯ್ ಅವರ ಮನೆಗೆ ತೆರಳಿ, ‘ನಾಯಿಯನ್ನು ಏಕೆ ಸಾಯಿಸಿದ್ದೀಯಾ’ ಎಂದು ಪ್ರಶ್ನಿಸಿದ್ದಾರೆ. ಆಗ ವಿಜಯ್, ವಾಸುದೇವ್, ರಾಮಚಂದ್ರ ಮತ್ತು ಸುಲೋಚನಾ ಎಂಬುವವರು ಹೇಮಂತ್ ಮೇಲೆ ಏಕಾಏಕಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ.
ಈ ವೇಳೆ ಹೇಮಂತ್ ಗಾಯಗೊಂಡಿದ್ದಾರೆ. ಗ್ರಾಮಸ್ಥರು ಜಗಳ ಬಿಡಿಸಿದ್ದಾರೆ. ಗಾಯಗೊಂಡ ಹೇಮಂತ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.