ಶಿವಮೊಗ್ಗ: ದೂರದ ರಾಜಸ್ಥಾನದ ಬಾರಮೇರ್ ಜಿಲ್ಲೆ ಗಂಗಾಸರ ಗ್ರಾಮದಿಂದ ವರ್ಷದ ಹಿಂದಷ್ಟೇ ₹5 ಸಾವಿರ ಸಂಬಳಕ್ಕೆ ಶಿವಮೊಗ್ಗಕ್ಕೆ ಬಂದಿದ್ದ ಪ್ರೇಮ್ ಸಿಂಗ್, ಸೋಮವಾರ ಮಧ್ಯಾಹ್ನ ದುಷ್ಕರ್ಮಿಗಳ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಸಿಂಗ್ ಜೊತೆ ಪುಟ್ಟ ತಮ್ಮ ಮಹೇಂದ್ರ ಸಿಂಗ್ ಇದ್ದಾರೆ.
‘ಗಾಂಧಿ ಬಜಾರ್ನ ನಂದಿ ಸಿಲ್ಕ್ಸ್ ಅಂಗಡಿಯ ಮಾಲೀಕ ಹೀರಾಲಾಲ್ ಅವರ ಬಳಿ ಪ್ರೇಮ್ ಸಿಂಗ್ ಕೆಲಸ ಮಾಡುತ್ತಿದ್ದರು. ಅವರಿಗೆ ಕನ್ನಡ ಮಾತನಾಡಲು ಬರೊಲ್ಲ. ಅಶೋಕ ರಸ್ತೆಯ ನನ್ನ ಮನೆಯಲ್ಲಿಯೇ ಇಟ್ಟುಕೊಂಡಿದ್ದೇನೆ’ ಎಂದು ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುತ್ತಿರುವ ನಂದಿ ಸಿಲ್ಕ್ಸ್ ಮಾಲೀಕ ಹೀರಾಲಾಲ್ ಹೇಳಿದರು.
ಅಂದು ಅಮೀರ್ ಅಹಮದ್ ವೃತ್ತದಲ್ಲಿ ಗಲಾಟೆ ಆರಂಭವಾಗು ತ್ತಿದ್ದಂತೆಯೇ ಅಂಗಡಿ ಬಾಗಿಲು ಹಾಕಿದೆ. ಪ್ರೇಮ್ ಸಿಂಗ್ ಹಾಗೂ ಇನ್ನೊಬ್ಬ ನೌಕರ ಶರವಣ ಜೊತೆಯಲ್ಲೇ ಮನೆಗೆ ಹೊರಟರು.ತರಕಾರಿ ಮಾರುಕಟ್ಟೆಯ ಬಳಿ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಮೊದಲು ಶರವಣ ಅವರಿಗೆ ಹೊಡೆಯುತ್ತಿದ್ದಂತೆಯೇ ಅವರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಪ್ರೇಮ್ ಸಿಂಗ್ ಕೆಳಗೆ ಬಿದ್ದಿದ್ದಾರೆ. ಗಾಯಗೊಂಡಿದ್ದ ಅವರು ನನಗೆ ಕರೆ ಮಾಡಿದ್ದು, ಸ್ಥಳಕ್ಕೆ ಬೈಕ್ನಲ್ಲಿ ತೆರಳಿದ ನಾನು ಆಸ್ಪತ್ರೆಗೆ ಕರೆತಂದೆ’ ಎಂದು ಹೀರಾ ಹೇಳಿದರು.
ಪ್ರೇಮ್ಸಿಂಗ್ಗೆ ಅಪ್ಪ–ಅಮ್ಮ ಇದ್ದಾರೆ. ಅವರ ಬಗ್ಗೆ ಹೆಚ್ಚಿನ ವಿವರ ಗೊತ್ತಿಲ್ಲ. ಊರಿನವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದೇವೆ ಎಂದರು.
* ಪ್ರೇಮ್ಸಿಂಗ್ ಈಗ ಅಪಾಯದಿಂದ ಪಾರಾಗಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲ ಚಿಕಿತ್ಸೆಯನ್ನು ನೀಡಲಾಗುತ್ತಿದೆ. -ಡಾ.ಎಸ್.ಶ್ರೀಧರ್, ವೈದ್ಯಕೀಯ ಅಧೀಕ್ಷಕರು, ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ