ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಸಮುದಾಯದವರಿಂದ ಸಾಮೂಹಿಕ ಆತ್ಮಹತ್ಯೆಯ ಬೆದರಿಕೆ

ಸಿ.ಎಂ ಸ್ವಕ್ಷೇತ್ರದಲ್ಲೇ ಭೂ ಹಕ್ಕು ವಿಚಾರದಲ್ಲಿ ನಿರಂತರ ದಬ್ಬಾಳಿಕೆ ಆರೋಪ
Last Updated 17 ಜೂನ್ 2021, 5:12 IST
ಅಕ್ಷರ ಗಾತ್ರ

ಶಿವಮೊಗ್ಗ: ಭೂಮಿ ಹಕ್ಕು ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದ ಮಾಯತಮ್ಮನ ಮುಚುಡಿ ಗ್ರಾಮದ ಪರಿಶಿಷ್ಟ ಸಮುದಾಯದ ಕುಟುಂಬಗಳು ಹಾಗೂ ಮೇಲ್ಜಾತಿಯವರ ಮುಸುಕಿನ ಗುದ್ದಾಟ ಈಗ ತಾರಕಕೇರಿದೆ. ತಾಲ್ಲೂಕು ಆಡಳಿತದ ಕ್ರಮ ವಿರೋಧಿಸಿ ಪರಿಶಿಷ್ಟ ಸಮುದಾಯದ ಕುಟುಂಬಗಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿವೆ.

ಬುಧವಾರ ಇಲ್ಲಿನ ತಹಶೀಲ್ದಾರ್ ಕವಿರಾಜ್ ಅವರು ಪೊಲೀಸರೊಂದಿಗೆ ಬಂದು ಪರಿಶಿಷ್ಟ ಸಮುದಾಯದವರು ಬಿತ್ತನೆ ಮಾಡಿದ್ದ ಜಮೀನಿನ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಗೊಳಿಸಿದರು. ಈ ಸಂದರ್ಭದಲ್ಲಿ ಪರಿಶಿಷ್ಟ ಸಮುದಾಯದ ಕುಟುಂಬದವರು ಸಾಮೂಹಿಕ ಆತ್ಮಹತ್ಯೆ ಬೆದರಿಕೆ ಒಡ್ಡಿದರು. ಇದರಿಂದ ಆತಂಕಗೊಂಡ ತಹಶೀಲ್ದಾರ್ ಹಾಗೂ ಪೊಲೀಸರು ಭೂಮಿ ವಶಪಡಿಸಿಕೊಳ್ಳುವ ಪ್ರಯತ್ನ ನಿಲ್ಲಿಸಿ ಹಿಂತಿರುಗಿದರು.

ಮಾಯತಮ್ಮನ ಮುಚುಡಿ ಗ್ರಾಮದ ಪರಿಶಿಷ್ಟ ಸಮುದಾಯದ 19 ಕುಟುಂಬಗಳು 40 ವರ್ಷಗಳಿಂದ ಸರ್ವೆ ನಂಬರ್ 128ರಲ್ಲಿ ತಲಾ 2 ಹಾಗೂ 3 ಎಕರೆಯಂತೆ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದವು. ಮಂಜೂರಾತಿಗಾಗಿ 1991ರಲ್ಲಿ ಆ ಕುಟುಂಬಗಳವರು 53 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಬಗರ್‌ಹುಕುಂ ಸಾಗುವಳಿ ಹಕ್ಕಿಗಾಗಿ ಅವರು ನಿರಂತರವಾಗಿ ಹೋರಾಡುತ್ತಾ ಬಂದಿದ್ದರೂ ಭೂ ಒಡೆತನದ ಭಾಗ್ಯ ಸಿಕ್ಕಿಲ್ಲ.

ಸಮುದಾಯದವರ ಆರೋಪವೇನು?: ‘ಸರ್ವೆ ನಂಬರ್ 128ರಲ್ಲಿ ಹಲವರು ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ನಮ್ಮ ಸಮುದಾಯದವರನ್ನು ಹೊರತುಪಡಿಸಿ ಎಲ್ಲರಿಗೂ ಭೂಮಿಯನ್ನು ಮಂಜೂರು ಮಾಡಿಕೊಟ್ಟಿದ್ದಾರೆ. ಈಗ ನಮಗೆ ಮಂಜೂರಾತಿ ಮಾಡಿಕೊಡುವಂತೆ ಕೇಳಿದರೆ ಇದು ಕಂದಾಯ ಭೂಮಿ ಎಂದು ಅಧಿಕಾರಿಗಳು ಹೇಳುತ್ತಾರೆ’ ಎಂಬುದು ಇಲ್ಲಿನ ಪರಿಶಿಷ್ಟ ಸಮುದಾಯದವರ ದೂರು.

ಕೂಲಿಗೆ ಕರೆದರೆ ₹ 25 ಸಾವಿರ ದಂಡ: ‘ಗ್ರಾಮದಲ್ಲಿ ನಮ್ಮನ್ನು ಯಾರೂ ಕೂಲಿಗೆ ಕರೆಯುವಂತಿಲ್ಲ. ಯಾರಾದರೂ ಕೂಲಿಗೆ ಕರೆದರೆ ಅವರಿಗೆ ₹ 25 ಸಾವಿರ ದಂಡ ಹಾಕುತ್ತಾರೆ. ಈ ಘಟನೆ ನಡೆದ ನಂತರ ನಾವು ಹೊರಗಡೆ ಓಡಾಡುವ ಹಾಗಿಲ್ಲ. ಮೇಲ್ಜಾತಿಯವರು ಎಲ್ಲ ಸೇರಿಕೊಂಡು ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ. ಇದೇ ಸರ್ವೆ ನಂಬರ್‌ನಲ್ಲಿ ಬಲಾಢ್ಯ ಜಾತಿಗಳವರಿಗೆ ಹತ್ತಾರು ಎಕರೆ ಭೂಮಿ ಮಂಜೂರು ಮಾಡಿರುವಾಗ ನಮಗೂ ಕನಿಷ್ಠ ಒಂದು ಎಕರೆ ಭೂಮಿಯನ್ನಾದರೂ ಮಂಜೂರು ಮಾಡಿ, ಬದುಕಲು ಬಿಡಿ. ನಮಗೆ ಈ ಜಮೀನು ಬಿಟ್ಟರೆ ಜೀವನಕ್ಕೆ ಯಾವುದೇ ಆಧಾರವಿಲ್ಲ. ಈಗ
ಭೂಮಿ ಬಿಡಿ ಅಂದರೆ ಜೀವನಕ್ಕೆ ನಾವೇನು ಮಾಡಬೇಕು? ನಾವು ಸಾಯಬೇಕು ಅಷ್ಟೇ’ ಎಂದು ಗ್ರಾಮದ ಸಂತ್ರಸ್ತ ವೀರೇಶ್ ಅಳಲು ತೋಡಿಕೊಂಡರು.

‘ಭೂಮಿ ಹಕ್ಕು ಕೇಳುತ್ತಿರುವುದನ್ನು ಸಹಿಸದ ಗ್ರಾಮದ ಲಿಂಗಾಯತರು ನಮ್ಮ ಮೇಲೆ ನಿರಂತರ ಹಲ್ಲೆ ನಡೆಸುತ್ತಾ ಬಂದಿದ್ದಾರೆ. ಈ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಅವರ ಸೂಚನೆ ಮೇರೆಗೆ ನಮ್ಮ ಕುಟುಂಬಗಳಿಗೆ ತಲಾ ಒಂದು ಎಕರೆ ಜಮೀನು ಕೊಡುವ ಬಗ್ಗೆ ಪಂಚಾಯಿತಿ ನಡೆದಿತ್ತು. ಆದರೂ ಅಲ್ಲಿನ ತೀರ್ಮಾನವನ್ನು ಗ್ರಾಮಸ್ಥರು ಪಾಲಿಸುತ್ತಿಲ್ಲ. ಬದಲಿಗೆ ಬಹಿಷ್ಕಾರ, ದಂಡ ಹಾಕಿದರು. ಒಂದು ವಾರದಲ್ಲಿ ಸಂಸದರು ಬಂದ ಮೇಲೆ ಚರ್ಚೆ ಮಾಡುವ ಭರವಸೆಯನ್ನು ತಹಶೀಲ್ದಾರ್‌ ನೀಡಿದ್ದಾರೆ. ನಮಗೆ ಭೂಮಿ ಮಂಜೂರು ಮಾಡದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಎಷ್ಟು ದಿನ ಅಂತ ಈ ದೌರ್ಜನ್ಯವನ್ನು ಸಹಿಸಿಕೊಳ್ಳೋದು’ ಎಂದು ವೀರೇಶ್ ನೋವು ತೋಡಿಕೊಂಡರು.

***

ರೈತರ ಮನ ಓಲೈಕೆ

‘ಮಾಯತಮ್ಮನ ಮುಚುಡಿ ಗ್ರಾಮದ ಗೋಮಾಳ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಲು ಮುಂದಾದ ರೈತರನ್ನು ತೆರವುಗೊಳಿಸಿದ್ದೆವು. ತೆರವುಗೊಳಿಸಿದ್ದ ರೈತ ಕುಟುಂಬದವರು ಬುಧವಾರ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು. ಆತ್ಮಹತ್ಯೆಗೆ ಮುಂದಾಗಿದ್ದ ರೈತರ ಮನ ಓಲೈಸಿ, ಕೃಷಿ ಭೂಮಿ ಪಡೆಯಲು ಸರ್ಕಾರಕ್ಕೆ ಮನವಿ ಸಲ್ಲಿಸಲು ತಿಳಿಸಿದ್ದೇವೆ’ ಎಂದು ತಹಶೀಲ್ದಾರ್ ಎಂ.ಪಿ.ಕವಿರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT