ಶಿವಮೊಗ್ಗ: ಶಿವಮೊಗ್ಗದಲ್ಲಿ ಶನಿವಾರ ಸಂಜೆ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್ ಅವರ ಭಾವಚಿತ್ರ ತೆರವುಗೊಳಿಸಲು ಒತ್ತಾಯಿಸಿದ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಂಡು ರಾಷ್ಟ್ರ ದ್ರೋಹ ಪ್ರಕರಣ ದಾಖಲಿಸಲು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.
ಸ್ವಾತಂತ್ರ್ಯದ ಅಮೃತಮಹೋತ್ಸವಕ್ಕೆ ರಾಜ್ಯ ಸರ್ಕಾರ ನೀಡಿರುವ ಜಾಹೀರಾತಿನಲ್ಲಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರ ಹಾಕದಿರುವ ಬಗ್ಗೆ ಇದೇ ವೇಳೆ ಮಾಧ್ಯಮದವರಿಂದ ಪ್ರಶ್ನೆ ಎದುರಾಗುತ್ತಿದ್ದಂತೆಯೇ ಶೋಭಾ ಪ್ರತಿಕ್ರಿಯಿಸದೇ ಮುಂದಕ್ಕೆ ಸಾಗಿದರು.
ಶಿಕಾರಿಪುರ ತಾಲ್ಲೂಕಿನ ಈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಅವರನ್ನು ವಿರೋಧಿಸುವವರು ಅಂಡಮಾನ್ ಜೈಲಿಗೆ ತೆರಳಿ ವಾಸ್ತವ ಸಂಗತಿ ಅರಿತುಕೊಳ್ಳಲಿ. ಬ್ರಿಟಿಷರಿಂದ ಏಳು ಬಾರಿ ಕರಿನೀರಿನ ಶಿಕ್ಷೆಗೆ ಒಳಗಾದ ಸಾವರ್ಕರ್ ತಮ್ಮ ಇಡೀ ಕುಟುಂಬವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸಮರ್ಪಿಸಿದ್ದರು ಎಂದರು.
ಧ್ವಜ ಸಂಹಿತೆ ಸಡಿಲಿಕೆ, ಶೋಭಾ ಸಮರ್ಥನೆ
ಇದಕ್ಕೂ ಮೊದಲುಈಸೂರಿನಲ್ಲಿ ಕುವೆಂಪು ವಿಶ್ವವಿದ್ಯಾಲಯ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿದ ಶೋಭಾ, ದೇಶದ ಜನರ ಮನೆ, ಮನಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಪ್ರಧಾನಿ ನರೇಂದ್ರ ಮೋದಿ ಕನಸು ನನಸಾಗಿಸಲು ಧ್ವಜ ಸಂಹಿತೆ ಸಡಿಲಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರಧ್ವಜ ಎಲ್ಲರಿಗೂ ಲಭ್ಯವಂತಾಗಲು ಬರೀ ಖಾದಿ ಬಟ್ಟೆಯಿಂದ ಮಾಡಿದ ಧ್ವಜ ಬಳಕೆ ಮಾಡಬೇಕು, ಕತ್ತಲಾಗುವುದರ ಒಳಗೆ ಧ್ವಜ ತೆಗೆಯಬೇಕು ಎಂಬ ಕಟ್ಟಳೆಗಳನ್ನು ತೆಗೆದು ಹಾಕಲಾಗಿದೆ ಎಂದರು.