ಶಿವಮೊಗ್ಗ: ಜಿಲ್ಲೆಯಾದ್ಯಂತ ಅಸಂಘಟಿತ ಕಾರ್ಮಿಕ ವಲಯವನ್ನು ವಿಸ್ತರಿಸುವ ಕಾರ್ಯ ರೂಪಿಸಲಾಗಿದೆ ಎಂದು ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ತಿಳಿಸಿದರು.
‘ಸಂಘವು ಕೊರೊನಾ ಸಂದರ್ಭ ದಲ್ಲಿ ಕಾರ್ಮಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಕಟ್ಟಡ ಕಾರ್ಮಿಕರಿಗೆ ಮಂಡಳಿಯ ಗುರುತಿನ ಚೀಟಿ ವಿತರಿಸಲಾಗಿದೆ. ₹ 5 ಸಾವಿರ ಪರಿಹಾರ ಹಣವನ್ನು ಕಾರ್ಮಿಕರ ಖಾತೆಗೆ ನೇರವಾಗಿ ಜಮಾ ಮಾಡಿಸುವುದಕ್ಕೆ ಸಂಘದ ಪದಾಧಿಕಾರಿಗಳು ಶ್ರಮಿಸಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
‘ಗ್ರಾಮೀಣ ಹಾಗೂ ನಗರ ಮಟ್ಟದಲ್ಲಿ ಶಾಖೆಗಳನ್ನು ಆರಂಭಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾ ಗಿದೆ. ಸರ್ಕಾರದ ಆದೇಶದಂತೆ ಶಾಲಾ, ಕಾಲೇಜು ಆರಂಭವಾಗುತ್ತಿರುವುದು ಸ್ವಾಗತಾರ್ಹ. ಶಾಲಾ, ಕಾಲೇಜು ಆವರಣ, ಕೊಠಡಿಗಳ ದುರಸ್ತಿ, ಸ್ವಚ್ಛತೆ ಮಾಡುವುದಿದ್ದರೆ ಒಂದು ದಿನದ ಮಟ್ಟಿಗೆ ಉಚಿತವಾಗಿ ಕಟ್ಟಡ ಕಾರ್ಮಿಕರು ಶ್ರಮದಾನ ಮಾಡಲು ಸಿದ್ಧ’ ಎಂದು ಮಾಹಿತಿ ನೀಡಿದರು.
ಕಟ್ಟಡ ಕಾರ್ಮಿಕರು ಕೆಲಸಕ್ಕಾಗಿ ನಗರಕ್ಕೆ ಮತ್ತು ದೂರದೂರದ ಪ್ರದೇಶಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ವ್ಯವಸ್ಥೆ ಮಾಡುವಂತೆ ಈಗಾಗಲೇ ಸರ್ಕಾರ ಸೂಚಿಸಿದೆ. ಕೂಡಲೇ ಉಚಿತ ಪಾಸ್ ವಿತರಿಸಲು ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಂಘದ ಜಿಲ್ಲಾ ಕಚೇರಿಯ ಕಟ್ಟಡವು ವಿನೋಬನಗರದ ಪೊಲೀಸ್ ಚೌಕಿ ಬಳಿ ನಿರ್ಮಾಣಗೊಳ್ಳುತ್ತಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ದಾನಿಗಳಿಗೆ, ಚುನಾಯಿತ ಪ್ರತಿನಿಧಿಗಳನ್ನು ಅಂದು ಸನ್ಮಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಿ. ಸುಬ್ರಮಣಿ, ಸಂಜಯ್ ಕುಮಾರ್, ಮಣಿಕಂಠ, ಆರ್ಮುಗಂ, ಕೆ. ಚಂದ್ರಶೇಖರ್, ಸತೀಶ್, ಅವಿನಾಶ್, ನಾಗರಾಜ್ ಇದ್ದರು.