ತೀರ್ಥಹಳ್ಳಿ: ಶಿಕಾರಿಪುರಕ್ಕೆ ಆರ್ಎಸ್ಎಸ್ ಪ್ರಚಾರಕರಾಗಿ ಬಂದಿದ್ದ ಯಡಿಯೂರಪ್ಪ ಅಂದಿನ ಕಾಂಗ್ರೆಸ್ ಗೂಂಡಾಗಿರಿ ಎದುರಿಸಿ ಬಿಜೆಪಿ ಕಟ್ಟಿದ್ದರು. ಈಗ ಪಕ್ಷ ಬೆಳೆದಿದ್ದು ಕಾರ್ಯಕರ್ತರ ಕೈ ಗಟ್ಟಿಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ಇಲ್ಲಿನ ವಿದ್ಯಾಧಿರಾಜ ಸಭಾಭವನದಲ್ಲಿ ಮಂಗಳವಾರ ಬಿಜೆಪಿ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿ, ಶಿಕಾರಿಪುರ ವಾರ್ಡ್ಗೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಯಾರೂ ಸಿದ್ಧರಿರಲಿಲ್ಲ. ಆಗ ನನ್ನ ತಾಯಿ ಸ್ಪರ್ಧಿಸಿದ್ದರು ಎಂದರು ನೆನಪಿಸಿದರು.
ಇಂದಿರಾಗಾಂಧಿ ಪ್ರಧಾನಮಂತ್ರಿ, ಗುಂಡೂರಾವ್ ಮುಖ್ಯಮಂತ್ರಿ, ಶಿಕಾರಿಪುರ ಕ್ಷೇತ್ರದ ಯಂಕಟಪ್ಪ ಜೈಲ್ ಮಂತ್ರಿಯಾಗಿದ್ದರು. ಅಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಎಲ್ಲಾ ಜಾತಿ, ವರ್ಗವನ್ನು ಸೇರಿಸಿಕೊಂಡು ಯಡಿಯೂರಪ್ಪ ಶಾಸಕರಾದರು. ಹೋರಾಟದಿಂದ ಬಿಜೆಪಿ ಬಲಿಷ್ಠವಾಗಿ ಬೆಳೆದು ನಿಂತಿದೆ ಎಂದರು.
‘ಅಭಿವೃದ್ಧಿ ಆಧಾರದ ಮೇಲೆ ಬಿಜೆಪಿಗೆ ಮತ ಕೇಳುತ್ತಿದೇವೆ. ಶಿವಮೊಗ್ಗ ಜಿಲ್ಲೆಯನ್ನು ಮಾದರಿ ಕ್ಷೇತ್ರವಾಗಿಸುವಲ್ಲಿ ಬಿ.ವೈ. ರಾಘವೇಂದ್ರ ಕೊಡುಗೆ ಅಪಾರ ಇದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ತಾಲ್ಲೂಕು ಘಟಕದ ಅಧ್ಯಕ್ಷ ನವೀನ್ ಹೆದ್ದೂರು, ಮಾಜಿ ಶಾಸಕ ಸ್ವಾಮಿರಾವ್, ಪ್ರಮುಖರಾದ ಮಹೇಶ್ ಹುಲ್ಕುಳಿ, ಸಾಲೇಕೊಪ್ಪ ರಾಮಚಂದ್ರ, ರಕ್ಷಿತ್ ಮೇಗರವಳ್ಳಿ, ಮೇದೊಳಿಗೆ ರಾಮಸ್ವಾಮಿ ಇದ್ದರು.