ತೀರ್ಥಹಳ್ಳಿ: ಕಾಂಗ್ರೆಸ್ಗೆ ಪೂರಕ ವಾತಾವರಣವಿದ್ದು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವನ್ನು ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ ವ್ಯಕ್ತಪಡಿಸಿದರು.
ಹಿಂದೆಂದೂ ಆಗದಷ್ಟು ಅಭಿವೃದ್ದಿ ಕಾಮಗಾರಿಯನ್ನು ಕ್ಷೇತ್ರದಲ್ಲಿ ಮಾಡಲಾಗಿದೆ. ಎಸ್ಟಿ, ಎಸ್ಸಿ ಸಮುದಾಯಕ್ಕೆ ಮೀಸಲಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಜನತೆ ಆಶೀರ್ವದಿಸಿದರೆ ರಾಜ್ಯವೇ ಇತ್ತ ತಿರುಗಿ ನೋಡುವಂಥ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತದೆ. ಗಾಜನೂರು ತುಂಗಾ ಅಣೆಕಟ್ಟೆಯ ಕೆಳಭಾಗದಲ್ಲಿ ಕೆಆರ್ ಎಸ್ ಮಾದರಿಯ ಬೃಂದಾವನ ನಿರ್ಮಿಸಲಾಗುವುದು. ಕೌವಲೇದುರ್ಗ, ನಗರ ಕೋಟೆಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು. ಆಗುಂಬೆಯಲ್ಲಿ ಕೇಬಲ್ ಚೇರ್ ಪ್ರಕೃತಿ ವೀಕ್ಷಣೆಗೆ ಅವಕಾಶ ಕಲ್ಪಿಸುವ ಯೋಜನೆಗಳನ್ನು ರೂಪಿಸಲಾಗುವುದು ಎಂದು ಕಿಮ್ಮನೆ ಹೇಳಿದರು.
ಕಳೆದ ಬಾರಿ ಚುನಾವಣೆಯಲ್ಲಿ ಹಣ, ಹೆಂಡ ಹಂಚುತ್ತಿರುವ ಕುರಿತು ಪೊಲೀಸರು, ಚುನಾವಣಾ ಆಯೋಗದ ಸಿಬ್ಬಂದಿಗೆ ಮಾಹಿತಿ ನೀಡಿದರೆ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಈ ಬಾರಿ ಜೆಡಿಎಸ್, ಬಿಜೆಪಿ ಅಕ್ರಮ ಎಸಗುವ ಮಾಹಿತಿ ಲಭ್ಯವಾಗಿದ್ದು, ಅಕ್ರಮ ತಡೆಯಲು ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಕಚೇರಿ ಎದುರು ಇರುವ ಅಂಬೇಡ್ಕರ್ ವೃತ್ತದ ಚಾವಣಿ ಮೇಲೆ ರೋಡ್ ಷೋ ಸಂದರ್ಭದಲ್ಲಿ ಮಂಜುನಾಥಗೌಡ, ಆರ್. ಮದನ್, ಆರಗ ಜ್ಞಾನೇಂದ್ರ ಅವರು ಶೂ ಕಳಚದೇ ನಿಂತು ಭಾಷಣ ಮಾಡುವ ಮೂಲಕ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಈ ಘಟನೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಕಿಮ್ಮನೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರ್ ಮಂಜುನಾಥ್, ಕೆಪಿಸಿಸಿ ಸದಸ್ಯ ಜಿ.ಎಸ್.ನಾರಾಯಣರಾವ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಟಮಕ್ಕಿ ಮಹಾಬಲೇಶ್, ಹಿರಿಯ ಮುಖಂಡರಾದ ಡಿ.ಲಕ್ಷ್ಮಣ್, ಡಿ.ಎಸ್.ವಿಶ್ವನಾಥಶೆಟ್ಟಿ, ಅಲ್ಪಸಂಖ್ಯಾತ ಮುಂಖಂಡ ವಿಲಿಯಂ ಮಾರ್ಟೀಸ್, ಪಟ್ಟಣ ಘಟಕದ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಇದ್ದರು.
ಅಕ್ರಮ ತಡೆಗಟ್ಟಲು ಪಕ್ಷದ ಕಾರ್ಯಕರ್ತರ ಪಡೆ ಸಜ್ಜು
ಕಳೆದಬಾರಿ ಚುನಾವಣೆಯಲ್ಲಿ ಹಣ, ಹೆಂಡ ಹಂಚುತ್ತಿರುವ ಕುರಿತು ಪೋಲೀಸರು, ಚುನಾವಣಾ ಆಯೋಗದ ಸಿಬ್ಬಂದಿಗೆ ಮಾಹಿತಿ ನೀಡಿದರೆ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಈ ಬಾರಿ ಜೆಡಿಎಸ್, ಬಿಜೆಪಿ ಅಕ್ರಮ ಎಸಗುವ ಮಾಹಿತಿ ಲಭ್ಯವಾಗಿದ್ದು, ಅಕ್ರಮ ತಡೆಯಲು ಪಕ್ಷದ ಕಾರ್ಯಕರ್ತ ಪಡೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಕಿಮ್ಮನೆ ರತ್ನಾಕರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.