ಭದ್ರಾವತಿ: ಇಲ್ಲಿನ ಜನ ನನ್ನನ್ನು ಅಪ್ಪಾಜಿ ಹೆಸರಿನಿಂದ ಗುರುತಿಸಿದರೆ ಸಾಕು. ಆದರೆ, ಕ್ಷೇತ್ರದ ಕೆಲಸ, ಕಾರ್ಯಕ್ಕಾಗಿ ಶಾಸಕನಾಗಿ ಗುರುತಿಸಿಕೊಳ್ಳುವುದು ನನ್ನ ಆದ್ಯತೆ ಎಂದು ಶಾಸಕ ಎಂ.ಜೆ. ಅಪ್ಪಾಜಿ ಅಭಿಪ್ರಾಯಪಟ್ಟರು.
ಇಲ್ಲಿನ ತಾಲ್ಲೂಕು ಕಸಾಪ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಜನ ಪ್ರೀತಿಪಟ್ಟು ಆಯ್ಕೆ ಮಾಡಿದ್ದಾರೆ. ಅವರಿಂದ ನಾನು ನನ್ನ ಸ್ಥಾನದ ಬಳಕೆಯನ್ನು ಅಪೇಕ್ಷಿಸುವುದಿಲ್ಲ. ಆದರೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕೆಲಸ ಮಾಡುವಾಗ ಈ ಪದವಿಯ ಅಗತ್ಯವಿದೆ. ಇಷ್ಟು ಬಿಟ್ಟರೆ ನಾನು ಸಹ ಸಾಮಾನ್ಯ ವ್ಯಕ್ತಿ’ ಎಂದರು.
ಉಪನ್ಯಾಸಕ ಬಿದರಗೋಡು ನಾಗೇಶ್ ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ ‘ಪ್ರತಿ ವ್ಯಕ್ತಿಯಲ್ಲಿ ಸೃಜನಶೀಲ ಮನಸ್ಸುಗಳು ಇರುತ್ತವೆ. ಅವುಗಳನ್ನು ಒಂದೆಡೆ ಸೇರಿಸುವ ಕೆಲಸ ನಡೆದಾಗ ಹೊಸ ವಿಚಾರಗಳು, ಪ್ರತಿಭೆಗಳು ಹೊರಬರಲು ಸಾದ್ಯ. ಈ ನಿಟ್ಟಿನಲ್ಲಿ ಕಸಾಪ ಕೆಲಸ ನಡೆದಿದೆ’ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಕಸಾಪ ಅಧ್ಯಕ್ಷ ಎ.ಪಿ. ಕುಮಾರ್, ಲಯನ್ಸ್ ಕಾರ್ಯದರ್ಶಿ ಯುವರಾಜ್, 3ನೇ ಸಮ್ಮೇಳನ ಅಧ್ಯಕ್ಷ ಎನ್.ಕೆ. ಶಂಕರಪ್ಪ, ನಗರಸಭಾ ಸದಸ್ಯ ಮಣಿ ಉಪಸ್ಥಿತರಿದ್ದರು.
ಎಸ್.ಬಿ. ಶಿವಲಿಂಗಪ್ಪ ಪ್ರಾರ್ಥಿಸಿದರು, ಪಿ.ಕೆ. ಸತೀಶ್ ಸ್ವಾಗತಿಸಿದರು, ತಿಮ್ಮಪ್ಪ ನಿರೂಪಿಸಿದರು, ಇದೇ ಸಂದರ್ಭದಲ್ಲಿ ಸಮ್ಮೇಳನ ಸಂದರ್ಭದಲ್ಲಿ ಸಹಕರಿಸಿದ ನಾಗರಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು.