ಚನ್ನಪಟ್ಟಣ: ಅಶುದ್ಧ ಕುಡಿಯುವ ನೀರಿನಿಂದಾಗಿ ಹಲವಾರು ರೋಗ ಬರುತ್ತಿದೆ. ಸಾರ್ವಜನಿಕರು ಶುದ್ಧ ಕುಡಿಯುವ ನೀರನ್ನು ಉಪಯೋಗಿಸಬೇಕು ಎಂದು ಮುಖಂಡ ಕೆ.ಎಸ್. ನಾಗರಾಜು ಸಲಹೆ ನೀಡಿದರು.
ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ರಾಮನಗರ ಹಾಗೂ ಬೆಂಗಳೂರಿನ ಸ್ಟೆಪ್ಸ್ ಸಂಸ್ಥೆಯ ಸಹಯೋಗದೊಂದಿಗೆ ‘ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ’ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ್ದ ‘ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತಾದ ಬೀದಿ ನಾಟಕ’ ಪ್ರದರ್ಶನದಲ್ಲಿ ಅವರು ಮಾತನಾಡಿದರು.
ನೀರಿನಿಂದ ಹರಡುವ ರೋಗಗಳ ಬಗ್ಗೆ ಸಾರ್ವಜನಿಕರು ಎಚ್ಚರವ ಹಿಸಬೇಕು. ಕಲುಷಿತ ವಾತಾವರಣದಿಂದಾಗಿ ರೋಗಭಾದೆಗಳು ಉಲ್ಬಣವಾಗುತ್ತಿವೆ. ಸ್ವಯಂ ಕಾಳಜಿ ವಹಿಸಿದರೆ ಮಾತ್ರವೇ ಆರೋಗ್ಯವಂತರಾಗಿ ಬಾಳಬಹುದು ಎಂದರು.
ಸಾಹಿತಿ ವಿಜಯ್ ರಾಂಪುರ ಮಾತನಾಡಿ, ‘ಶುದ್ಧ ವಾಯು, ಆಹಾರ ಮತ್ತು ನೀರು ಆರೋಗ್ಯವಂತ ಜೀವನಕ್ಕೆ ಅತ್ಯವಶ್ಯಕ. ನಾವು ವಾಸಿಸುವ ಪರಿಸರವನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ ವಹಿಸುವ ಮೂಲಕ ಆರೋಗ್ಯವಂತರಾಗಿ ಬಾಳಬಹುದು’ ಎಂದರು.
ಹಿರಿಯ ಜನಪದ ಗಾಯಕ ಚೌ.ಪು. ಸ್ವಾಮಿ ಜಾಗೃತಿ ಗೀತೆಗಳ ಗಾಯನ ಹಾಡಿದರು. ಸ್ಟೆಪ್ಸ್ ಸಂಸ್ಥೆಯ ಬಿ.ಎಸ್. ಸುಷ್ಮ, ಅಂಬಿಕಾ, ಗ್ರಾಮದ ಮುಖಂಡರಾದ ಕಾರ್ತಿಕ್, ಧನಂಜಯ, ಹರೀಶ್ ಸೋನಿ, ಲಿಖಿತ್, ಬಾಬು, ಪೂರ್ಣೇಶ್, ಪುಟ್ಟ ಭಾಗವಹಿಸಿದ್ದರು.